ಕಮಲನಗರ(ಬೀದರ್ ಜಿಲ್ಲೆ): ಔರಾದ್ ಶಾಸಕ ಪ್ರಭು ಚವಾಣ್ ಅವರು ತಮ್ಮ ದತ್ತುಪುತ್ರಿ ಅಶ್ವಿನಿ ಕದಮ್ ಅವರ ವಿವಾಹವು ಹಕ್ಯಾಳ ಗ್ರಾಮದ ಸಂತೋಷ ಗಾಯಕವಾಡ ಅವರ ಜೊತೆ ಜೂನ್ 9 ರಂದು ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ನೆರವೇರಲಿದೆ.
ಕಾಳಗಾಪುರದ ಅಶ್ವಿನಿ ಅವರ ತಂದೆ–ತಾಯಿ ಇಬ್ಬರೂ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಅನಾಥವಾದ ಅಶ್ವಿನಿ ಸಂಕಷ್ಟಕ್ಕೆ ಸಿಲುಕಿದ್ದರು. ಏ.29 ರಂದು ಗ್ರಾಮದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲು ಶಾಸಕ ಪ್ರಭು ಚವಾಣ್ ಬಂದಿದ್ದರು. ಈ ವೇಳೆ ಗ್ರಾಮಸ್ಥರು ಯುವತಿಯ ಪರಿಸ್ಥಿತಿಯನ್ನು ಗಮನಕ್ಕೆ ತಂದರು. ಕೂಡಲೇ ‘ಅಶ್ವಿನಿ ಈಗ ನನ್ನ ಮಗಳು. ಈಕೆಯನ್ನು ದತ್ತು ಪಡೆದಿದ್ದು, ಮದುವೆಯ ಜವಾಬ್ದಾರಿ ನನ್ನದೇ. ಈಕೆಗೆ ಮನೆಯನ್ನೂ ಕಟ್ಟಿಸಿಕೊಡುತ್ತೇನೆ’ ಎಂದವರು, ಅಶ್ವಿನಿಯನ್ನು ವೇದಿಕೆಗೆ ಕರೆದು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು.
‘ದತ್ತು ಪುತ್ರಿಯ ಮದುವೆ ಅದ್ಧೂರಿಯಾಗಿ ನಡೆಯಲಿದೆ. ವರ ಎಸ್ಸೆಸ್ಸೆಲ್ಸಿ ವರೆಗೆ ವ್ಯಾಸಂಗ ಮಾಡಿದ್ದು ಕೃಷಿ ಕಾಯಕದಲ್ಲಿ ತೊಡಗಿದ್ದಾನೆ’ಎಂದು ಪ್ರಭು ಚವಾಣ್ ತಿಳಿಸಿದರು.
‘ಈ ಮದುವೆ ಮೂಲಕ ಸಾಮಾಜಿಕ ಸಾಮರಸ್ಯ, ವಿಶ್ವ ಬಂಧುತ್ವದ ಸಂದೇಶವನ್ನು ಸಾರಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.