ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಂಪ್ಯೂಟರ್ ಶಿಕ್ಷಕರ ಸೇವೆಯನ್ನು ಕಾಯಂಗೊಳಿಸಬೇಕು ಮತ್ತು ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಶಾಲಾ ಕಾಲೇಜು ಕಂಪ್ಯೂಟರ್ ಶಿಕ್ಷಕ ಸಂಘದ ಶಿಕ್ಷಕರು ಸೋಮವಾರ ಪ್ರತಿಭಟನೆ ನಡಸಿದರು.
ನಗರದ ಟ್ರಿನಿಟಿ ವೃತ್ತದ ಬಳಿಯ ಎಜುಕಾಮ್ ಸಲ್ಯೂಷನ್ಸ್ ಕಂಪೆನಿಯ ಮುಂದೆ ಪ್ರತಿಭಟನೆ ನಡೆಸಿದ ಶಿಕ್ಷಕರು, `ಸುಮಾರು ಐದು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಕಂಪ್ಯೂಟರ್ ಶಿಕ್ಷಕರ ಸೇವೆಯ ಗುತ್ತಿಗೆಯ ಅವಧಿಯು ಪೂರ್ಣಗೊಳ್ಳುತ್ತಿದ್ದು, ಇದುವರೆಗೂ ಕಂಪೆನಿ ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡಿಲ್ಲ~ ಎಂದು ಆರೋಪಿಸಿದರು.
`ರಾಜ್ಯದ ವಿವಿಧ ಶಾಲಾ ಕಾಲೇಜುಗಳಲ್ಲಿ ಸುಮಾರು 2,500 ಜನ ಕಂಪ್ಯೂಟರ್ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಸೇವೆಯನ್ನು ಕಾಯಂಗೊಳಿಸಬೇಕು. ಎಜ್ಯುಕಾಮ್ ಕಂಪೆನಿಯ ಮೂಲಕ ಸರ್ಕಾರ ಪ್ರತಿ ಶಿಕ್ಷಕರಿಗೆ ತಿಂಗಳಿಗೆ ಸುಮಾರು ಮೂರು ಸಾವಿರ ರೂಪಾಯಿ ವೇತನವನ್ನು ನಿಗಧಿ ಪಡಿಸಿದೆ. ಆದರೆ ಕಂಪೆನಿಯು ವೇತನ ನೀಡುವಲ್ಲಿ ವಿಳಂಬ ಮಾಡುತ್ತಿದೆ. ಬಾಕಿ ಇರುವ ವೇತನ ಬಿಡುಗಡೆಗೆ ಸರ್ಕಾರ ಮಧ್ಯ ಪ್ರವೇಶಿಸಬೇಕು~ ಎಂದು ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಒತ್ತಾಯಿಸಿದರು.
`ಸೇವೆ ಕಾಯಂ ಹಾಗೂ ವೇತನ ಬಿಡುಗಡೆಯ ಬಗ್ಗೆ ಮೇ 15 ರೊಳಗೆ ವೇತನ ಸರ್ಕಾರ ತೀರ್ಮಾನ ಕೈಗೊಳ್ಳದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರವಾದ ಚಳವಳಿ ಹಮ್ಮಿಕೊಳ್ಳಲಾಗುವುದು~ ಎಂದು ಎಚ್ಚರಿಸಿದರು. ಸಂಘದ ಕಾರ್ಯದರ್ಶಿಗಳಾದ ಮಂಜುನಾಥ್, ಕಲ್ಲೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.