ADVERTISEMENT

ಕನ್ನಡಿಗ ಅಧಿಕಾರಿಯ ಇಂಗ್ಲಿಷ್‌ ವ್ಯಾಮೋಹ

​ಪ್ರಜಾವಾಣಿ ವಾರ್ತೆ
Published 21 ಜನವರಿ 2014, 19:30 IST
Last Updated 21 ಜನವರಿ 2014, 19:30 IST

ಬೆಂಗಳೂರು: ಸರ್ಕಾರಿ ವ್ಯವ­ಹಾರಕ್ಕೆ ಸಂಬಂಧಿಸಿ­ದಂತೆ ಹೆಚ್ಚು­ವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್‌ ಅವರು ಇಂಗ್ಲಿಷ್‌ನಲ್ಲಿ ಬರೆದ ಪತ್ರವನ್ನು ಓದದೇ ಹಿಂದಿರು­ಗಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾ­ರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪರಮೇಶ್‌ ಪಾಂಡೆ, ‘ಇಂಗ್ಲಿಷ್‌ನಲ್ಲಿ ಪತ್ರ ವ್ಯವಹಾರ ನಡೆ­ಸಿದ್ದೇಕೆ’ ಎಂಬು­ದರ ಕುರಿತು ಸಮ­ಜಾಯಿಷಿಯನ್ನೂ ಕೇಳಿದ್ದಾರೆ.

ಕನ್ನಡಿಗರೇ ಆಗಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಈ ಧೋರಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ಉಮೇಶ್‌ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯವನ್ನೂ ಮಾಡಿದ್ದಾರೆ.

‘ರಾಜ್ಯ ಸರ್ಕಾರದ ಎಲ್ಲ ಪತ್ರ ವ್ಯವ­ಹಾರವನ್ನು ಸಂಪೂರ್ಣವಾಗಿ ಕನ್ನಡ­ದಲ್ಲೇ ಮಾಡಬೇಕು’ ಎಂಬ ನಿಯಮ ಇದೆ. ಉಮೇಶ್‌ ಅವರು ಜನವರಿ 6ರಂದು ಪಾಂಡೆ ಅವರಿಗೆ ಇಂಗ್ಲಿಷ್‌ನಲ್ಲಿ ಪತ್ರ ಬರೆದು ತಮ್ಮ ನೇತೃತ್ವದಲ್ಲಿ ರಚಿಸಿರುವ ಸಮಿತಿಗಳ ಸಭೆ ನಿಯಮಿತ­ವಾಗಿ ನಡೆಯುತ್ತಿಲ್ಲ ಎಂದು ದೂರಿದ್ದರು.

ಆ ಪತ್ರಕ್ಕೆ ಜ. 18ರಂದು ಪ್ರತಿಕ್ರಿಯಿಸಿರುವ ಮೂಲತಃ ಉತ್ತರ ಪ್ರದೇಶದ ಪಾಂಡೆ, ‘ನೀವು ಕಳುಹಿಸಿದ ಪತ್ರ ಇಂಗ್ಲಿಷ್‌ನಲ್ಲಿದೆ. ಕನ್ನಡದಲ್ಲೇ ವ್ಯವ­ಹಾರ ನಡೆಸಬೇಕು ಎನ್ನುವುದು ನಿಮಗೆ ಗೊತ್ತಿದ್ದರೂ ಇಂಗ್ಲಿಷ್‌ನಲ್ಲಿ ಬರೆದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ‘ನಿಮ್ಮ ಈ ವರ್ತನೆ ಕುರಿತಂತೆ ಸಮ­ಜಾಯಿಷಿ ನೀಡ­ಬೇಕು’ ಎಂದು ಸೂಚಿಸಿ, ಪತ್ರವನ್ನು ವಾಪಸು ಕಳುಹಿಸಿ ಕೊಟ್ಟಿದ್ದಾರೆ.

ಉಮೇಶ್‌ ಅವರ ವರ್ತನೆಯನ್ನು ಕನ್ನಡ ಅಭಿ­ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಖಂಡಿಸಿದ್ದಾರೆ. ‘ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ­ಯಾಗಿದ್ದರೂ ಉಮೇಶ್‌ ಅವರು ಇಂಗ್ಲಿಷ್‌ ವ್ಯಾಮೋಹದಿಂದ ಹೊರಬಾ­ರದೇ ಇರುವುದು ವಿಪರ್ಯಾಸದ ಸಂಗತಿ’ ಎಂದು ಕಿಡಿಕಾರಿದ್ದಾರೆ.

ಕನ್ನಡಿಗರ ಅಸಡ್ಡೆ: ‘ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅನ್ಯ ಭಾಷಿಕ ಐಎಎಸ್‌ ಅಧಿಕಾರಿಗಳು ಕನ್ನಡ ಅನುಷ್ಠಾನ­ಗೊಳಿಸಲು ಬದ್ಧತೆ ತೋರುತ್ತಿದ್ದು, ಕನ್ನಡ ಭಾಷಿಕ ಅಧಿಕಾರಿಯಾದ ಉಮೇಶ್‌ ಅಸಡ್ಡೆ ತೋರಿದ್ದಾರೆ. ಅವರಿಗೆ ಇನ್ನೂ ಮನ ಪರಿವರ್ತನೆ ಆಗ­ದಿರುವುದು ವಿಷಾದದ ವಿಚಾರ’ ಎಂದು ಹೇಳಿದ್ದಾರೆ.

‘ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ­ಯಲ್ಲಿ­ದ್ದರೂ ಉಮೇಶ್‌ ಅವರು ಕನ್ನಡವನ್ನು ಸಂಪೂರ್ಣ­ವಾಗಿ ನಿರ್ಲಕ್ಷ್ಯ ಮಾಡುತ್ತಿರುವುದು ನೋವು ತಂದಿದೆ’ ಎಂದಿರುವ ‘ಮುಖ್ಯಮಂತ್ರಿ’ ಚಂದ್ರು, ‘ಉಮೇಶ್‌ ಅವರ ವಿರುದ್ಧ ನಿರ್ದಾಕ್ಷಿ­ಣ್ಯವಾಗಿ ಕ್ರಮ ಕೈಗೊಳ್ಳ­ಬೇಕು’ ಎಂದು ಸಿದ್ದರಾಮಯ್ಯ ಅವರನ್ನುಒತ್ತಾಯಿ­ಸಿದ್ದಾರೆ.

ಪಾಂಡೆಗೆ ಧನ್ಯವಾದ: ಉಮೇಶ್‌ ಅವರ ಇಂಗ್ಲಿಷ್‌ ಪತ್ರ ಓದದೇ ವಾಪಸ್‌ ಕಳಿಸಿರುವುದಕ್ಕೆ ‘ಮುಖ್ಯ­ಮಂತ್ರಿ’ ಚಂದ್ರು ಅವರು ಪಾಂಡೆ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಪಾಂಡೆ ಕನ್ನಡ ಪ್ರೇಮವನ್ನೂ ಕರ್ತವ್ಯ ಪ್ರಜ್ಞೆಯನ್ನೂ ಮೆರೆದಿದ್ದಾರೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.