ಬಾಗಲಕೋಟೆ: `ಯಾವುದೇ ಭಾಷೆ ಬದುಕಬೇಕಾದರೇ ಜನತೆಗೆ ಹೆಚ್ಚು ಉಪಯುಕ್ತವಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಭಾಷೆಯ ಉಪಯುಕ್ತತೆ ಅಧಿಕವಾಗುವಂತೆ ಮಾಡಬೇಕಿದೆ` ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಸಲಹೆ ನೀಡಿದರು.
ಮುಧೋಳ ಪಟ್ಟಣದ ರನ್ನ ಕ್ರೀಡಾಂಗಣದಲ್ಲಿ ರನ್ನ ಪ್ರತಿಷ್ಠಾನ ಮತ್ತು ಕನ್ನಡ, ಸಂಸ್ಕೃತಿ ಇಲಾಖೆ ಆಶ್ರಯಲ್ಲಿ ನಡೆಯುತ್ತಿರುವ `ರನ್ನ ವೈಭವ' ಸಾಂಸ್ಕೃತಿಕ ಉತ್ಸವದ ಎರಡನೇ ದಿನವಾದ ಮಂಗಳವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂಗ್ಲಿಷ್ ಎಲ್ಲೆಲ್ಲಿ ಬಳಕೆಯಲ್ಲಿದೆಯೋ ಅಲ್ಲೆಲ್ಲ ಕನ್ನಡ ಬಳಕೆಯಾಗುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ 10 ವರ್ಷಗಳಿಂದ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರೊಡನೆ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಆದರೆ, ತಂತ್ರಾಂಶ ಅಭಿವೃದ್ಧಿಗೆ ಯಾರೊಬ್ಬರೂ ಶ್ರಮಿಸಿರಲಿಲ್ಲ, ಇದೀಗ ಸಚಿವ ಗೋವಿಂದ ಕಾರಜೋಳ ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಕನ್ನಡ ತಂತ್ರಾಂಶ ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರ ಉತ್ತಮ ಹೆಜ್ಜೆ ಇಟ್ಟಿದ್ದು, ತಂತ್ರಾಂಶ ಅಭಿವೃದ್ಧಿ ಉಳಿಕೆ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಲಹೆ ನೀಡಿದ ಅವರು, ತಂತ್ರಾಂಶ ತಜ್ಞರು ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಜಾಗತಿಕ ಭರಾಟೆಯಲ್ಲಿ ಜಗತ್ತಿನಲ್ಲಿರುವ 1400 ಭಾಷೆಗಳಲ್ಲಿ ಎರಡು ತಿಂಗಳಿಗೆ ಒಂದು ಭಾಷೆ ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶೀಘ್ರ ಲೋಕಾರ್ಪಣೆ: ಡಾ. ಕಂಬಾರ ಅವರನ್ನು ಸನ್ಮಾನಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಈಗಾಗಲೇ ಅಭಿವೃದ್ಧಿ ಪಡಿಸಲಾಗಿರುವ ಕನ್ನಡ ತಂತ್ರಾಂಶವನ್ನು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.