ಬದಿಯಡ್ಕ (ಕಾಸರಗೋಡು ಜಿಲ್ಲೆ): `ಕಯ್ಯೊರರ ಜನ್ಮ ಶತಮಾನೋತ್ಸವವನ್ನು ಕರ್ನಾಟಕ ಸರ್ಕಾರದ ನೇತೃತ್ವದಲ್ಲಿ ನಡೆಸಬೇಕು. ಕಯ್ಯೊರರ ಸ್ವಗೃಹ `ಕವಿತಾ ಕುಟೀರ'ದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು. ಕಯ್ಯೊರರ ಬದುಕೇ ಆದರ್ಶದ ವಿಶ್ವಕೋಶ' ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಹೇಳಿದರು.
ಬದಿಯಡ್ಕದ ಕಯ್ಯೊರ ಕಿಂಞಣ್ಣ ರೈ ಅವರ ಸ್ವಗೃಹ `ಕವಿತಾ ಕುಟೀರ'ದಲ್ಲಿ ಶನಿವಾರ ನಡೆದ ಕಯ್ಯೊರರ 99ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಕಯ್ಯೊರರಿಗೆ ಹಾರಾರ್ಪಣೆ ಮಾಡಿ, ಫಲತಾಂಬೂಲ ಹಾಗೂ ಲಾಡು ತಿನ್ನಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ಕರ್ನಾಟಕ ಸರ್ಕಾರವು ಹೊರನಾಡ ಕನ್ನಡಿಗರ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ರೂ 500 ಕೋಟಿ ಮೀಸಲಿಡಬೇಕು. ಕಾಸರಗೋಡು ನಗರಸಭೆಯಲ್ಲಿ ಕಯ್ಯೊರರ ಪ್ರತಿಮೆ ಸ್ಥಾಪಿಸಬೇಕು. ಕಯ್ಯೊರರಿಗೆ ರಾಷ್ಟ್ರಪ್ರಶಸ್ತಿ ನೀಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು' ಎಂದರು.
ಅಧ್ಯಕ್ಷತೆ ವಹಿಸಿದ ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, `ಕೇರಳ ಹಾಗೂ ಕರ್ನಾಟಕ ಸರ್ಕಾರಕ್ಕೆ ಕಯ್ಯೊರರ ಸಾಧನೆಗಳು ಗೊತ್ತಿದೆ. ಆದ್ದರಿಂದ ಎರಡೂ ಸರ್ಕಾರಗಳೂ ಕಯ್ಯೊರರ ಸಾಧನೆಗೆ ಗೌರವ ನೀಡಬೇಕು' ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮಾತನಾಡಿ, `ತುಳುನಾಡು ಹಾಗೂ ಗಡಿನಾಡಿನ ಕನ್ನಡಿಗರ ಸಿರಿಮುಡಿಯ ಕಿರೀಟದ ಗರಿಯಂತೆ ಇರುವ ಕಯ್ಯೊರರು ನಮಗೆಲ್ಲಾ ಆದರ್ಶ. ಕಯ್ಯೊರರಿಗೆ ದೊರೆಯಬೇಕಾದ ಸ್ಥಾನಮಾನಕ್ಕೆ ಕರ್ನಾಟಕ ವಿಧಾನಸಭೆಯಲ್ಲಿ ಪ್ರಯತ್ನಿಸುತ್ತೇನೆ' ಎಂದು ಹೇಳಿದರು.
ಬದಿಯಡ್ಕ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್ ಮಾತನಾಡಿ, `ಕಯ್ಯೊರರು ನಮ್ಮ ಅಭಿಮಾನದ ಪ್ರತೀಕ. ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಯ್ಯೊರರ ಪ್ರತಿಮೆ ಸ್ಥಾಪಿಸುವುದಕ್ಕೆ ಆಡಳಿತ ಸಮಿತಿ ಸಹಕಾರ ನೀಡಲಿದೆ ಎಂದರು.
ಕಯ್ಯೊರರ ಪುತ್ರ ಪ್ರಸನ್ನ ರೈ ಅವರು ಕಯ್ಯೊರರು ರಚಿಸಿದ ಆಶಯಗೀತೆ ಹಾಡಿದರು. ಶ್ರಿನಿವಾಸ ಆಳ್ವ ಕಳತ್ತೂರು ಕಾರ್ಯಕ್ರಮ ನಿರೂಪಿಸಿದರು. ಕಯ್ಯೊರರ ಬರಹಗಳು, ಪತ್ರಿಕಾ ವರದಿಗಳ ಪ್ರದರ್ಶನ ಹಾಗೂ ಕೂಡ್ಲು ಹೃಷಿಕೇಶ ಭಕ್ತವೃಂದದಿಂದ ಕಯ್ಯೊರ ಕಾವ್ಯಗಾಯನ ನಡೆಯಿತು.
ಕರ್ನಾಟಕ ಸರ್ಕಾರಕ್ಕೆ ಸಚಿವ ಯು.ಟಿ. ಖಾದರ್ ಅವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.