ಬೆಂಗಳೂರು: ಮುಂದಿನ 8 ವರ್ಷಗಳಲ್ಲಿ ರಾಜ್ಯದಿಂದ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ (ಐಸಿಟಿ) ಉದ್ಯಮದ ರಫ್ತು ಪ್ರಮಾಣವನ್ನು ರೂ 4 ಲಕ್ಷ ಕೋಟಿಗಳಿಗೆ ಹೆಚ್ಚಿಸುವ ಹಾಗೂ ಆ ಕ್ಷೇತ್ರದಲ್ಲಿ 12 ಲಕ್ಷ ಹೊಸ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶದಿಂದ `ಕರ್ನಾಟಕ ಐಸಿಟಿ ಗ್ರೂಪ್- 2020~ ಅನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.
ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಗುರುವಾರ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ (ಜಿಮ್) ಉದ್ಘಾಟನಾ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
`ಒಂದು ಸಾವಿರ ಹೊಸ ಉದ್ಯಮಗಳ ಸ್ಥಾಪನೆಗಾಗಿ ಉತ್ತೇಜನಾ ಕ್ರಮಗಳ ಬಗೆಗೂ ಐಸಿಟಿ ಗ್ರೂಪ್ ಶಿಫಾರಸು ಮಾಡಲಿದೆ. ಈ ಗ್ರೂಪ್ ಅನ್ನು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವೀಸಸ್ನ ಅಧ್ಯಕ್ಷ ಟಿ.ವಿ.ಮೋಹನ್ದಾಸ್ ಪೈ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ~ ಎಂದು ಅವರು ಹೇಳಿದರು.
ಗ್ರೂಪ್ನ ಧ್ಯೇಯೋದ್ದೇಶದ ಫಲಕವನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರಿಸಿ ಮಾತನಾಡಿದ ಮೋಹನ್ದಾಸ್ ಪೈ, `ಸದ್ಯ ಐಸಿಟಿ ಉದ್ಯಮದ ರಫ್ತು ಪ್ರಮಾಣ ರೂ 1.35 ಲಕ್ಷ ಕೋಟಿಯಷ್ಟಿದೆ. 8 ಲಕ್ಷ ಮಂದಿಗೆ ಉದ್ಯೋಗಾವಕಾಶ ಒದಗಿಸಿದೆ~ ಎಂದರು.
ತೈವಾನ್ ಮಾದರಿ: ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ ಮುದ್ದೇನಹಳ್ಳಿಯಲ್ಲಿ ತೈವಾನ್ನ ಕೈಗಾರಿಕಾ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಮಾದರಿಯಲ್ಲಿ ತಂತ್ರಜ್ಞಾನ ಆವಿಷ್ಕಾರ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ರೈತರ ಪ್ರತಿಭಟನೆ
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತು ಪ್ರಾರಂಭಿಸುತ್ತಿದ್ದಂತೆ ಸಭಿಕರ ನಡುವೆ ಕುಳಿತಿದ್ದ ಕೆಲ ರೈತ ಕಾರ್ಯಕರ್ತರು ಎದ್ದು ಹಸಿರು ಶಾಲುಗಳನ್ನು ಬೀಸುತ್ತಾ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಘೋಷಣೆ ಕೂಗುವವರನ್ನು ಹಿಡಿದು ಬಂಧಿಸಿ, ಹೊರಗೆ ಕರೆದೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.