ADVERTISEMENT

ಕಲುಷಿತ ಬಿಸಿಯೂಟ ಸೇವನೆ: 20 ವಿದ್ಯಾರ್ಥಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಮಂಗಳೂರು: ನಗರದ ಕಂಕನಾಡಿ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗುರುವಾರ ಕಲುಷಿತ ಬಿಸಿಯೂಟ ಸೇವಿಸಿದ ಪರಿಣಾಮ 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥರಾದರು. ಮಧ್ಯಾಹ್ನ 1 ಗಂಟೆಗೆ ಬಿಸಿಯೂಟ ಸೇವಿಸಿದ ಕೂಡಲೇ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ವಾಂತಿ-ಭೇದಿ ಮಾಡಿಕೊಳ್ಳಲಾರಂಭಿಸಿದರು.
 
ಶಿಕ್ಷಕರು ಆರಂಭದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದರು. ಸ್ವಲ್ಪ ಹೊತ್ತಿಗೆ ಮತ್ತಷ್ಟು ವಿದ್ಯಾರ್ಥಿಗಳು ಅಸ್ವಸ್ಥರಾದರು. ಪರಿಸ್ಥಿತಿಯ ಗಂಭೀರತೆ ಅರಿತ ಆಸುಪಾಸಿನ ಹೂವಿನ ಅಂಗಡಿ ಮಾಲೀಕರು ವಿದ್ಯಾರ್ಥಿಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಕೆಲವರು ಚೇತರಿಸಿಕೊಂಡರೂ ನಾಲ್ವರ ಸ್ಥಿತಿ ಸಂಜೆವರೆಗೂ ಸುಧಾರಿಸಿರಲಿಲ್ಲ.

`ಬೆಳಿಗ್ಗೆ 9 ಗಂಟೆಗೆ ಬಿಸಿಯೂಟ ತಂದು ಮಧ್ಯಾಹ್ನ ಕೊಡುತ್ತಾರೆ. ಊಟ ಹಳಸಿತ್ತು, ಪೇಪರ್ ತುಂಡು ಸಹ ಅದರಲ್ಲಿತ್ತು. ಈ ಹಿಂದೆಯೂ ವಿದ್ಯಾರ್ಥಿಗಳು ದೂರಿದ್ದರು. ಆದರೂ ಗುಣಮಟ್ಟ ಹೆಚ್ಚಿಸಲು ಶಾಲೆಯವರು ಕ್ರಮ ಕೈಗೊಂಡಿಲ್ಲ~ ಎಂದು ವ್ಯಾಪಾರಿ ಅಶ್ರಫ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.