ADVERTISEMENT

ಕಳಪೆ ಬಿಸಿಯೂಟ: ಪೋಷಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:00 IST
Last Updated 14 ಸೆಪ್ಟೆಂಬರ್ 2011, 19:00 IST

ಹರಪನಹಳ್ಳಿ (ದಾವಣಗೆರೆ ಜಿಲ್ಲೆ): ಕಳಪೆ ಗುಣಮಟ್ಟದ ಬಿಸಿಯೂಟ ಪೂರೈಕೆ ಹಾಗೂ ಶಿಕ್ಷಕರ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ತಾಲ್ಲೂಕಿನ ಯಡಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಪೋಷಕರು ಮತ್ತು ಮಕ್ಕಳು ಬುಧವಾರ  ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಮಧ್ಯಾಹ್ನದ ಬಿಸಿಯೂಟಕ್ಕೆ ಆಹಾರ ಧಾನ್ಯವನ್ನು ಶುಚಿಗೊಳಿಸದೆ ಅಡುಗೆ ತಯಾರಿಸುತ್ತಿರುವುದರಿಂದ ಊಟದಲ್ಲಿ ಎಷ್ಟೋ ಬಾರಿ ಹುಳುಗಳು ಕಾಣಿಸಿಕೊಂಡಿವೆ.

ಸಾಂಬಾರ್ ತಯಾರಿಸಲು ಅಗತ್ಯಕ್ಕೆ ಅನುಗುಣವಾಗಿ ತರಕಾರಿ, ಎಣ್ಣೆ ಹಾಗೂ ದಿನಸಿಗಳನ್ನು ಪೂರೈಸುತ್ತಿಲ್ಲ. ಇಂತಹ ಕಳಪೆ ಆಹಾರ ಸೇವಿಸಲು ಹಿಂದೇಟು ಹಾಕುತ್ತಿರುವ ಮಕ್ಕಳು ಮನೆಯಲ್ಲಿನ ದನಗಳಿಗೆ ತಂದು ಸುರಿಯುತ್ತಾರೆ.

ಕುಡಿಯುವ ನೀರು ಸಂಗ್ರಹಾಗಾರ (ಸಿಂಟೆಕ್ಸ್ ಟ್ಯಾಂಕ್)ಅನ್ನು ತೊಳೆಯದೆ ಇರುವುದರಿಂದ ಅದರಲ್ಲಿ ಹಲ್ಲಿಗಳು ಸತ್ತು ಬಿದ್ದಿವೆ. ಕಸ-ಕಡ್ಡಿ ಹಾಗೂ ಚಪ್ಪಲಿ ತುಂಬಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇಲ್ಲಿನ ಬಹುತೇಕ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ. ತಮ್ಮ ಇಚ್ಛಾನುಸಾರ ಶಾಲೆಗೆ ಬರುತ್ತಾರೆ. ಕರ್ತವ್ಯದ ಅವಧಿಯಲ್ಲಿಯೇ ಶಿಕ್ಷಕರೊಬ್ಬರು ಮಕ್ಕಳಿಂದ ಸಿಗರೇಟ್, ತಾಂಬೂಲ ಇತ್ಯಾದಿ ತರಿಸಿಕೊಳ್ಳುತ್ತಾರೆ. ಶಾಲಾ ಆವರಣದಲ್ಲಿಯೇ ಧೂಮಪಾನ ಮಾಡುತ್ತ, ಮೊಬೈಲ್‌ನಲ್ಲಿನ ಹಾಡು ಕೇಳುತ್ತಾ ಕಾಲ ಕಳೆಯುತ್ತಾರೆ ಎಂದು ದೂರಿದರು.

ಶಾಲೆಯಲ್ಲಿ ಸರಿ ಇರುವ ಏಕೈಕ ಶೌಚಾಲಯವನ್ನು ಶಿಕ್ಷಕರು ಉಪಯೋಗಿಸುತ್ತಿರುವುದರಿಂದ ಮಕ್ಕಳು ರಸ್ತೆ ಬದಿ  ಅವಲಂಬಿಸಬೇಕಾಗಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಅಪಘಾತವಾಗುವ ಸಂಭವವಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು.

ಎಚ್. ಸಂತೋಷ್, ಎ. ಮಂಜಪ್ಪ, ಎಚ್. ಕಿರಣ್‌ಕುಮಾರ್, ಬಸಪ್ಪ, ಸಿದ್ದೇಶ್, ಹನುಮಂತಪ್ಪ, ಆನಂದ, ಪರಶುರಾಮಪ್ಪ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.