ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ಸಂಸದ ವೀರಪ್ಪ ಮೊಯಿಲಿ ಅವರು ಪಕ್ಷದ ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
‘ಹಣ ರಾಜಕೀಯವನ್ನು ಕಾಂಗ್ರೆಸ್ ಬಗೆಹರಿಸಬೇಕಿದೆ. ರಸ್ತೆ ಗುತ್ತಿಗೆದಾರರು ಮತ್ತು ಅವರ ಜತೆ ಸಂಬಂಧ ಹೊಂದಿರುವ ರಾಜ್ಯ ಪಿಡಬ್ಲ್ಯುಡಿ ಸಚಿವರು ಮುಂಬರುವ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳನ್ನು ಹೇಗೆ ನಿರ್ಧರಿಸುವರು’ ಎಂದು ಮೊಯಿಲಿ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಅವರ ಟ್ವಿಟರ್ ಖಾತೆಯಲ್ಲೂ ಪ್ರಕಟಗೊಂಡಿತ್ತು. ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇಬ್ಬರ ಖಾತೆಯಿಂದಲೂ ಟ್ವೀಟ್ ಅನ್ನು ಅಳಿಸಿಹಾಕಲಾಗಿದೆ.
(ವೀರಪ್ಪ ಮೊಯಿಲಿ ಹಾಗೂ ಅವರ ಮಗ ಹರ್ಷ ಮೊಯಿಲಿ ಮಾಡಿದ್ದಾರೆ ಎನ್ನಲಾದ ಟ್ವೀಟ್. ಈ ಎರಡೂ ಟ್ವೀಟ್ಗಳನ್ನು ಈಗ ಅಳಿಸಿಹಾಕಲಾಗಿದೆ)
ಸಂಬಂಧವಿಲ್ಲ ಎಂದ ಮೊಯಿಲಿ: ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಮೊಯಿಲಿ, ಟ್ವೀಟ್ಗೂ ತಮಗೂ ಸಂಬಂಧವಿಲ್ಲ. ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದಿರುವುದಾಗಿ ಸುದ್ದಿವಾಹಿನಿಗಳು ವರದಿ ಮಾಡಿವೆ.
ಬಿಜೆಪಿಯಿಂದ ಟೀಕಾ ಪ್ರಹಾರ: ಮೊಯಿಲಿ ಮಾಡಿದ್ದಾರೆ ಎನ್ನಲಾದ ಟ್ವೀಟ್ನ ವಿಷಯ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಟೀಕೆ ಮಾಡಲಾರಂಭಿಸಿದ್ದಾರೆ.
‘ಕಾಂಗ್ರೆಸ್ ಟಿಕೆಟ್ ನೀಡುವ ವಿಷಯದಲ್ಲಿ ರಾಜ್ಯ ಲೋಕೋಪಯೋಗಿ ಸಚಿವ ಮತ್ತು ರಸ್ತೆ ಗುತ್ತಿಗೆದಾರರ ನಡುವಿನ ನಂಟಿನ ಬಗ್ಗೆ ಬಹಿರಂಗಪಡಿಸಿರುವ ಮಾನ್ಯ ಶ್ರೀ ಮೊಯ್ಲಿಯವರು, ಕಾಮಗಾರಿ ಮಾಡದೆ ₹ 1500 ಕೋಟಿ ಬಿಲ್ ಪಡೆದಿರುವ ಕಾಂಗ್ರೆಸ್ ಶಾಸಕ ಶ್ರೀ ಮುನಿರತ್ನ ಬಗ್ಗೆ ಏನಂತಾರೆ? ಈ ದುಡ್ಡು ಕೂಡಾ ಕಾಂಗ್ರೆಸ್ ಟಿಕೆಟ್ಗಾ? ಅಥವಾ ಚುನಾವಣಾ ಖರ್ಚಿಗಾ?’ ಎಂದು ಕೇಂದ್ರ ಸಚಿವ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.