ಚಿತ್ರದುರ್ಗ: ‘ಕಾಂಗ್ರೆಸ್ ದಿಲ್ವಾಲೆ(ಪ್ರೀತಿಪಾತ್ರರು) ಪಕ್ಷವಲ್ಲ ‘ಡೀಲ್ ವಾಲೆ’ (ಭ್ರಷ್ಟಾಚಾರ ಮಾಡುವವರು) ಪಕ್ಷವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೇರ ಆರೋಪ ಮಾಡಿದರು.
ಇಲ್ಲಿ ನಡೆದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಮಾತನಾಡಿದ ಅವರು, ‘ದಲಿತರ ಕಲ್ಯಾಣ ಮಾಡುವುದಾಗಿ ಹೇಳಿ, ಜಿಲ್ಲೆಯಿಂದ ಆರಿಸಿಬಂದ ಮಂತ್ರಿಯೊಬ್ಬರು ಕೊಳವೆಬಾವಿ ಕೊರೆಸುವ, ಹಾಸ್ಟೆಲ್ಗಳಿಗೆ ಹಾಸಿಗೆ ಒದಗಿಸುವ ಯೋಜನೆಗಳಲ್ಲಿ ದುಡ್ಡು ಹೊಡೆದರು’ ಎಂದು ಮೋದಿ ಅವರು ಸಚಿವ ಎಚ್.ಆಂಜನೇಯ ಹೆಸರು ಪ್ರಸ್ತಾಪಿಸದೆ ಚೇಡಿಸಿದರು.
‘ಜನಕಲ್ಯಾಣದ ಯೋಜನೆಗಳ ಹೆಸರಿನಲ್ಲಿ ಮಂತ್ರಿಗಳು ತಮ್ಮ ಕಲ್ಯಾಣ ಮಾಡಿಕೊಂಡಿರುವುದು ಇಲ್ಲಿನ ಮಕ್ಕಳಿಗೂ ಗೊತ್ತಿದೆ. ಗಂಗಾಕಲ್ಯಾಣ ಯೋಜನೆಯಡಿ ನೀರಿಗಾಗಿ 1,200 ಕೊಳವೆ ಬಾವಿ ಕೊರೆಸುತ್ತೇನೆಂದು, ಚುನಾವಣೆ ಘೋಷಣೆಗೆ ಮುನ್ನ ಕಾಗದ ಪತ್ರಗಳನ್ನು ಬದಲು ಮಾಡಿ ಹಣ ಹೊಡೆದರು’ ಎಂದರು.
‘ಕುಡಿಯುವ ನೀರು ಮಾತ್ರವಲ್ಲ, ಹಾಸ್ಟೆಲ್ಗಳ ಹಾಸಿಗೆಯಲ್ಲು ಭ್ರಷ್ಟಾಚಾರ ಮಾಡಿದರು. ಕಾಂಗ್ರೆಸ್ನವರು ಹಾಸಿಗೆಯಲ್ಲಿ ನೋಟು ಇಡುತ್ತಾರೆ. ಹಾಗಾಗಿ ಹಾಸಿಗೆ ಮೇಲೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಇವರನ್ನು ಹೀಗೆಯೇ ಬಿಟ್ಟರೆ, ನಿಮ್ಮ ಮನೆಯ ಹಾಸಿಗೆಯವರೆಗೂ ಬರುತ್ತಾರೆ’ ಎಂದು ಕುಹಕವಾಡಿದರು.
‘ಇಲ್ಲಿನ ಮಂತ್ರಿಯೊಬ್ಬರ ಹೆಸರಿನ ಮುಂದೆಯೇ ಡೀಲ್ ಎಂಬ ಅನ್ವರ್ಥನಾಮ ರೂಢಿಯಲ್ಲಿದೆ. ಅದರಿಂದಲೇ ಅವರ ವ್ಯಕ್ತಿತ್ವ ತಿಳಿಯುತ್ತದೆ. ಮಂತ್ರಿಗಳ ಮೇಲೆ ಗಂಭೀರ ಆರೋಪಗಳು ಬಂದರೂ, ಮುಖ್ಯಮಂತ್ರಿ ತಕ್ಷಣ ಕ್ಲೀನ್ಚೀಟ್ ನೀಡುತ್ತಾರೆ. ಅಂತವರಿಗೆ ನೀವು ಬೀಳ್ಕೊಡುಗೆ ನೀಡಲೇಬೇಕು’ ಎಂದು ಕರೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.