ಇಂದಿನ ಆರ್ಥಿಕ ಜಗತ್ತಿನಲ್ಲಿ ಬಜೆಟ್ ಎಂದರೆ ಕೇವಲ ಜಮೆ ಹಾಗೂ ಖರ್ಚನ್ನು ಸರಿದೂಗಿಸುವುದಲ್ಲ. ಅದು ಸರ್ಕಾರದ ನೀತಿಗೆ ಸಂಬಂಧಿಸಿದ ಹೇಳಿಕೆಯಾಗಬೇಕು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಈ ಬಜೆಟ್ ಮಂಡಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರು ಆರಂಭಿಸಿದ ಪ್ರತ್ಯೇಕ ಕೃಷಿ ಬಜೆಟ್ ಸಂಪ್ರದಾಯ ಮೆಚ್ಚತಕ್ಕ ಕ್ರಮವಾಗಿದೆ. ಕೃಷಿ ವಲಯಕ್ಕೆ ಹೆಚ್ಚಿನ ಗಮನ ಕೊಡಬೇಕೆನ್ನುವುದು ಇದರ ಅರ್ಥ. ಕೃಷಿ ವಲಯದಲ್ಲಿ ಶೇ 5ಕ್ಕಿಂತೂ ಹೆಚ್ಚು ಪ್ರಗತಿ ಕಾಣದಿದ್ದರೆ ಯಾವುದೇ ರಾಜ್ಯ ಅಥವಾ ದೇಶ ಶೇ 9ರಿಂದ 10ರಷ್ಟು ಆರ್ಥಿಕ ವೃದ್ಧಿ ದರ (ಜಿಡಿಪಿ) ಸಾಧಿಸುವುದು ಅಸಾಧ್ಯ.
ರಾಜ್ಯದಲ್ಲಿ 11 ನೇ ಪಂಚವಾರ್ಷಿಕ ಯೋಜನೆಯಲ್ಲಿ ಶೇ 5.7ರಷ್ಟು ಅಭಿವೃದ್ಧಿಯಲ್ಲಿ ನಿರೀಕ್ಷಿಸಲಾಗಿತ್ತು. ಆದರೆ ಸಾಧಿಸಿದ್ದು ಶೇ 3.3ರಷ್ಟು ಮಾತ್ರ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಶೇ 4.63ರಷ್ಟು ಅಭಿವೃದ್ಧಿಯ ಗುರಿ ಹಾಕಿಕೊಳ್ಳಲಾಗಿದೆ. `ಕಳೆದ ವರ್ಷ ಶೇ 1.8ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ' ಎಂದು ಬಜೆಟ್ ಭಾಷಣದಲ್ಲಿ ಹೇಳಲಾಗಿದೆ. ನಿಜಕ್ಕೂ ಇದು ನಿರಾಶಾದಾಯಕ ಚಿತ್ರಣ. ಕೃಷಿ ಅಭಿವೃದ್ಧಿಯನ್ನು ಚುರುಕುಗೊಳಿಸಲು ಸರ್ಕಾರವು ತಜ್ಞರನ್ನೊಳಗೊಂಡ ಉನ್ನತ ಮಟ್ಟದ ಕಾರ್ಯ ಪಡೆ ರಚಿಸಬೇಕು. ಇಲ್ಲದಿದ್ದರೆ ವಿವಿಧ ಜಿಲ್ಲೆಗಳಲ್ಲಿನ ಬರದ ಪರಿಸ್ಥಿತಿಯು ಮುಂಬರುವ ವರ್ಷಗಳಲ್ಲಿಯೂ ಮುಂದುವರಿಯಲಿದೆ.
ಕೃಷಿ ಚಿತ್ರಣ ಬದಲಾಗಬೇಕು: `ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸ' ಆಗಬಾರದು. ಬರದ ಛಾಯೆ ಆವರಿಸಿಕೊಂಡಿರುವ ಈ ಸಂದರ್ಭದಲ್ಲಿ ಮೋಡ ಬಿತ್ತನೆಯ ಬಗ್ಗೆ ಚಿಂತನೆ ಮಾಡಬೇಕು. ಪರ್ಯಾಯ ಬೆಳೆ, ವಾಣಿಜ್ಯ ಬೆಳೆ, ಪರಿಣಾಮಕಾರಿಯಾದ ನೀರಾವರಿ ವ್ಯವಸ್ಥೆ, ಗುಣಮಟ್ಟದ ಬೀಜಗಳು...ಇವೇ ಮುಂತಾದ ವಿಷಯಗಳತ್ತ ಗಮನ ಹರಿಸಬೇಕು. ಆಗ ಮಾತ್ರ ಕೃಷಿ ಚಿತ್ರಣ ಬದಲಾಗಬಹುದು.
ಅಪಾರ ಪ್ರಮಾಣ ಮರುಭೂಮಿ, ನೀರಿನ ಕೊರತೆ ಇದ್ದರೂ ಗುಜರಾತ್ ರಾಜ್ಯವು ನಿರಂತರವಾಗಿ ಶೇ 8ರಷ್ಟು ಕೃಷಿ ಅಭಿವೃದ್ಧಿ ಸಾಧಿಸಿರುವಾಗ ನಾವು ಕೈಕಟ್ಟಿ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ.
ತಾತ್ಕಾಲಿಕ ಪರಿಹಾರ: ಕಡು ಬಡವರಿಗೆ (ಬಿಪಿಎಲ್ ಕುಟುಂಬಗಳಿಗೆ) ರೂ 2 ರಂತೆ ಪ್ರತಿ ಕೆ.ಜಿ ಅಕ್ಕಿ ವಿತರಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಇದು ತಾತ್ಕಾಲಿಕ ಪರಿಹಾರ ಮಾತ್ರವೇ ಆಗುತ್ತದೆ. ತರಬೇತಿ, ಶಿಕ್ಷಣ, ಕೌಶಲ ವೃದ್ಧಿ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಸಬಲರನ್ನಾಗಿಸಬೇಕು. ಆಗ ಮಾತ್ರ ಶಾಶ್ವತ ಪರಿಹಾರ ಸಿಗುತ್ತದೆ.
ಕಾಣದ ಖುಷಿ: ಮೂಲಸೌಕರ್ಯಕ್ಕೆ ಏನೇನು ಮಾಡಲಾಗಿದೆ ಎಂದು ಶೆಟ್ಟರ್ ವಿವರವಾಗಿ ಹೇಳಿದ್ದಾರೆ. ಆದರೆ ಭವಿಷ್ಯವನ್ನು ದೃಷ್ಟಿಯಲ್ಲಿಕೊಂಡು ನೋಡಿದರೆ ಖುಷಿ ಪಡುವುದೇನೂ ಕಾಣುವುದಿಲ್ಲ. ರಸ್ತೆ ಅಭಿವೃದ್ಧಿ, ಹೊಸ ರಸ್ತೆ ಸಂಪರ್ಕ..ಇತ್ಯಾದಿ ಪ್ರಸ್ತಾವನೆಗಳನ್ನು ಬಜೆಟ್ನಲ್ಲಿ ಮಂಡಿಸಲಾಗಿದೆ. ಆದರೆ ಈಗಿರುವ ಜನಸಂಖ್ಯೆಗೆ ಇವು ಏನೇನೂ ಸಾಲದು. ಅಭಿವೃದ್ಧಿಗಾಗಿ ಸರ್ಕಾರವು ನಿಜವಾಗಿಯೂ ಸೂಕ್ತ ಮೂಲಸೌಕರ್ಯ ಒದಗಿಸುವುದಾದರೆ, ಅದು ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗುತ್ತದೆ.
ಕೈಗಾರಿಕೆಗಳ ಕೇಂದ್ರೀಕರಣ: ಬಹುತೇಕ ಕೈಗಾರಿಕೆಗಳು ಈಗಲೂ ಬೆಂಗಳೂರಿನ ಒಳಗೆ ಹಾಗೂ ಸುತ್ತಮುತ್ತ ಮಾತ್ರ ಕಂಡುಬರುತ್ತವೆ. ಮೂಲಸೌಕರ್ಯ ಕೊರತೆಯಿಂದ ಇವುಗಳು ವಿಸ್ತರಣೆಯಾಗಿಲ್ಲ. ನಗರದ ಉತ್ತರ/ದಕ್ಷಿಣದಲ್ಲಿ ತಲೆ ಎತ್ತಿರುವ ಕೈಗಾರಿಕೆಗಳು ಕಚ್ಚಾ ಸಾಮಗ್ರಿಗಳನ್ನು ಪಡೆಯುವುದಕ್ಕೆ ಅಥವಾ ಸಿದ್ಧಗೊಂಡ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಳಿಸುವುದಕ್ಕೆ ತೊಂದರೆ ಅನುಭವಿಸುತ್ತಿವೆ.
ವಿದ್ಯುತ್ ಸೌಲಭ್ಯದ ಕೊರತೆ ಕೂಡ ಇವುಗಳನ್ನು ಬಾಧಿಸುತ್ತಿದೆ. ಇವೆಲ್ಲ ಕಾರಣಗಳಿಂದ ಕೈಗಾರಿಕಾ ವಲಯದ ಅಭಿವೃದ್ಧಿ ದರ ಕೇವಲ ಶೇ 2.4ರಷ್ಟು.
ನಾನು ಅನೇಕ ಉದ್ದಿಮೆದಾರರ ಜತೆ ಸಂಪರ್ಕದಲ್ಲಿದ್ದೇನೆ. ಯಾರಿಗೂ ಸರ್ಕಾರದ ಸಬ್ಸಿಡಿಯಲ್ಲಿ ಆಸಕ್ತಿ ಇಲ್ಲ. ಅವರಿಗೆ ಬೇಕಾಗಿರುವುದು ಅಡಚಣೆ ಇಲ್ಲದ ಗುಣಮಟ್ಟದ ವಿದ್ಯುತ್ ಸರಬರಾಜು, ಪರಿಣತ ಕೆಲಸಗಾರರು, ಮಾರುಕಟ್ಟೆ ಹಾಗೂ ಬಂದರಿಗೆ ಸಂಪರ್ಕ. ಇವೆಲ್ಲವೂ ಸಾಧ್ಯವಾದರೆ ಕೈಗಾರಿಕಾ ವಲಯವು ಶೇ 10ಕ್ಕಿಂತಲೂ ಹೆಚ್ಚು ಅಭಿವೃದ್ಧಿ ಸಾಧಿಸುತ್ತದೆ ಎಂದು ನಾನು ನಿಸ್ಸಂಶಯವಾಗಿ ಹೇಳುತ್ತೇನೆ.
ಸಮಾಧಾನದ ಸಂಗತಿ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಗುಜರಾತ್ ಮಾದರಿಯ ಅಭಿವೃದ್ಧಿ ಮಂತ್ರವನ್ನು ಪಠಿಸುತ್ತಿದೆ. ಕೈಗಾರಿಕಾ ಸಚಿವರು ಸೇರಿದಂತೆ ಅನೇಕ ಅಧಿಕಾರಿಗಳು ಆ ರಾಜ್ಯಕ್ಕೆ ಭೇಟಿ ನೀಡಿ ಬಂದಿದ್ದಾರೆ. ದುರದೃಷ್ಟವೆಂದರೆ ನಮ್ಮ ರಾಜ್ಯದಲ್ಲಿ ಗುಜರಾತ್ ಮಾದರಿಯ ಅಭಿವೃದ್ಧಿಯ ಸೂಚನೆ ಕೂಡ ಕಾಣುತ್ತಿಲ್ಲ. ಕರ್ನಾಟಕದಲ್ಲಿ ಶಾಂತಿಯುತ ವಾತಾವರಣವಿದೆ; ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿದೆ ಎನ್ನುವುದೇ ಉದ್ಯಮಿಗಳಿಗೆ ಕೊಂಚ ಸಮಾಧಾನದ ಸಂಗತಿ.
ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಆದರೆ ಇವುಗಳಲ್ಲಿ ಹೆಚ್ಚಿನವು ಸದ್ಯದ ತಮ್ಮ ಜನಸಂಖ್ಯೆ ಭಾರ ನಿಭಾಯಿಸುವ ಸ್ಥಿತಿಯಲ್ಲಿ ಇಲ್ಲ.
ಹೀಗಾಗಿ ಈ ಘೋಷಣೆಗಳು ಕನಸಾಗಿಯೇ ಉಳಿಯಲಿವೆ. ಇಂಥ ನಗರಗಳಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಹೆಚ್ಚಿಸಿದರೆ ಸ್ಥಳೀಯರ ಸಮಸ್ಯೆ ಮತ್ತಷ್ಟು ಜಾಸ್ತಿಯಾಗುತ್ತದೆ. ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಸರಿಯಾದ ರಸ್ತೆ ಸಂಪರ್ಕ ಇಲ್ಲ. ಬೆಂಗಳೂರು/ಹಾಸನಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ ರಸ್ತೆಯೇ ಇದಕ್ಕೆ ಜ್ವಲಂತ ಉದಾಹರಣೆ.
ಪ್ರವಾಸೋದ್ಯಮ ನಿರ್ಲಕ್ಷ್ಯ: ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಬಹುತೇಕ ಪ್ರವಾಸಿ ತಾಣಗಳಲ್ಲಿ ಸರಿಯಾದ ಸೌಲಭ್ಯ ಇಲ್ಲ. ಹೆಚ್ಚಿನ ಪ್ರವಾಸಿಗರು ಬೆಂಗಳೂರು ಹಾಗೂ ಮೈಸೂರಿಗೆ ಮಾತ್ರ ತಮ್ಮ ಭೇಟಿ ಸೀಮಿತಗೊಳಿಸುತ್ತಾರೆ. ಬಹುತೇಕ ಪ್ರವಾಸಿಗರು ಹಂಪಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ಆದರೆ ಹೊಸಪೇಟೆಯಲ್ಲಿ ಸರಿಯಾದ ರಸ್ತೆಗಳು, ಹೋಟೆಲ್ಗಳು ಇಲ್ಲ. ಈ ಬಾರಿಯ ಬಜೆಟ್ನಲ್ಲಿ ಪ್ರವಾಸೋದ್ಯಮ ಇಲಾಖೆಗೆ ರೂ 50 ಕೋಟಿ ಹೆಚ್ಚಿಸಲಾಗಿದೆ. ಕೇವಲ ಒಂದು ಪ್ರವಾಸಿ ತಾಣದ ಅಭಿವೃದ್ಧಿಗೂ ಈ ಹಣ ಸಾಕಾಗುವುದಿಲ್ಲ. ಬಜೆಟ್ನಲ್ಲಿ ಪ್ರಕಟಿಸಿರುವ ಬಹುತೇಕ ಯೋಜನೆಗಳು ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೀಡಿರುವ ಅನುದಾನವನ್ನು ನೋಡಿದರೆ ಇದು ಪಕ್ಕಾ ಚುನಾವಣೆ ಕೇಂದ್ರಿತ ಬಜೆಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಟ್ಟಾರೆ ಇದು ವಸ್ಥು ಸ್ಥಿತಿಯನ್ನು ಕಾಯ್ದುಕೊಂಡ ಬಜೆಟ್ ಅಷ್ಟೆ. ಹೊಸ ತಾಲ್ಲೂಕುಗಳ ರಚನೆಯಿಂದ ಜನರ ಬದುಕು ಸುಗಮವಾಗುತ್ತದೆ ಎನ್ನುವುದೊಂದೇ ಈ ಬಜೆಟ್ನ ಗಮನಾರ್ಹ ಸಂಗತಿಯಾಗಿದೆ.
(ಲೇಖಕರು ಎಫ್ಕೆಸಿಸಿಐ ಮಾಜಿ ಅಧ್ಯಕ್ಷರು, ಭರೂಕಾ ಸಮೂಹ ಸಂಸ್ಥೆಗಳ ನಿರ್ದೇಶಕರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.