ಕುಣಿಗಲ್: ಉತ್ತರಾಖಂಡ ಜಲಪ್ರಳಯದಲ್ಲಿ ಪಟ್ಟಣದ ಮೂರು ಕುಟುಂಬದವರು ಸಿಲುಕಿದ್ದು, ರಾಜ್ಯಕ್ಕೆ ಹಿಂದಿರುಗುವ ದಾರಿ ಕಾಣದೆ ಪರದಾಡುತ್ತಿದ್ದಾರೆ. ಅಂದಾನಯ್ಯ ಬಡಾವಣೆಯ ಎಚ್ ಅಂಡ್ ಆರ್ ಜಾನ್ಸನ್ ಕಂಪೆನಿ ಉದ್ಯೋಗಿ ಉದಯ್ ಉಪಾಧ್ಯಾಯ, ಪತ್ನಿ ಉಮಾ, ಪುತ್ರ ವರುಣ್, ತಮ್ಮ ಸೋದರ ಸಂಬಂಧಿ ಜತೆ ಕಾಶಿ, ಹರಿದ್ವಾರ, ಹೃಷಿಕೇಶ ಪ್ರವಾಸಕ್ಕೆ ತೆರಳಿದ್ದರು.
ಶನಿವಾರದ ಜಲಪ್ರಳಯದಿಂದ ಉತ್ತರಕಾಶಿಗೆ 7 ಕಿ.ಮೀ. ದೂರದ ಗಣೇಶದೂರ್ ಶಿವಾನಂದಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ. ಒಂದೂವರೆ ಕಿ.ಮೀ. ಉದ್ದದ ರಸ್ತೆ ಮಳೆ ರಭಸಕ್ಕೆ ಕೊಚ್ಚಿ ಹೋಗಿದ್ದು, ಉತ್ತರಕಾಶಿಗೆ ಹೋಗುವ ಮಾರ್ಗವಿಲ್ಲದಂತಾಗಿದೆ. ಈ ಬಗ್ಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಉದಯ್, ಶನಿವಾರದಿಂದ ಆಶ್ರಮದಲ್ಲಿ ಆಶ್ರಯ ಪಡೆದಿದ್ದೇವೆ. ಊಟೋಪಚಾರಕ್ಕೆ ತೊಂದರೆ ಇಲ್ಲ. ವಿದ್ಯುತ್ ಸಂಪರ್ಕ ಇಲ್ಲದೆ ಗುಡ್ಡಗಾಡು ಪ್ರದೇಶದ ಜನ ಕಷ್ಟಪಟ್ಟು ತಂದುಕೊಟ್ಟ ಡೀಸೆಲ್ನಿಂದ ಬೆಳಕು ಕಾಣುತ್ತಿದ್ದೇವೆ ಎಂದು ತಿಳಿಸಿದರು.
ಮಳೆ ಅಬ್ಬರ ಕಡಿಮೆಯಾಗಿದೆ. ಗುಡ್ಡಗಾಡು ಪ್ರದೇಶದಿಂದ ಗುಡ್ಡಗಳು ರಸ್ತೆ ಮೇಲೆ ಕುಸಿದಿದ್ದು, ರಸ್ತೆ ಸಂಪರ್ಕ ಕಡಿದುಕೊಂಡಿವೆ. ಸಹಾಯಕ್ಕಾಗಿ ರಾಜ್ಯ ಸರ್ಕಾರ ಅಧಿಕಾರಿಗಳನ್ನು ನೇಮಿಸಿದೆ. ಆದರೆ, ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ದೆಹಲಿ ಕರ್ನಾಟಕ ಭವನದ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಆಹಾರ- ಆರೋಗ್ಯದ ಬಗ್ಗೆ ಮಾತ್ರ ವಿಚಾರಿಸುತ್ತಾರೆ. ನಮ್ಮನ್ನು ಇಲ್ಲಿಂದ ಸುರಕ್ಷಿತವಾಗಿ ಕರೆದೊಯ್ಯುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಗಂಗೋತ್ರಿ, ಕಾಶಿಗೆ ಹೋಗುವ ಆಲೋಚನೆ ಕೈಬಿಟ್ಟು ರಾಜ್ಯಕ್ಕೆ ಮರಳಿದರೆ ಸಾಕು ಎನಿಸುತ್ತದೆ ಎಂದಿದ್ದಾರೆ.
ಎಪಿಎಂಸಿ ಸದಸ್ಯ, ಉದ್ಯಮಿ ಸಂತೋಷ್ ಕುಟುಂಬದವರು ಸಹ ಹೃಷಿಕೇಶಕ್ಕೆ ತೆರಳುವ ಮಾರ್ಗ ಮಧ್ಯೆ ಮಹಾ ಮಳೆಗೆ ಮಾರ್ಕಾಟ್ ಎಂಬ ಪ್ರದೇಶದಲ್ಲಿ ಸಿಲುಕಿದ್ದಾರೆ. ಮಳೆ ಕಡಿಮೆಯಾಗಿ ಪ್ರವಾಹ ಇಳಿಮುಖವಾಗಿರುವುದರಿಂದ ನವದೆಹಲಿಗೆ ಹಿಂದಿರುಗಲು ಯತ್ನಿಸುತ್ತಿದ್ದಾರೆ. ರಸ್ತೆ ಸಂಪರ್ಕ ಕಡಿದು ಹೋಗಿರುವುದರಿಂದ ದುರಸ್ತಿಯಾದ ನಂತರ ವಾಪಸಾಗಲಿದ್ದಾರೆ. ಸಂತೋಷ್ ಪ್ರಕಾರ ರಾಜ್ಯಕ್ಕೆ ಹಿಂದಿರುಗಲು ಇನ್ನೊಂದು ವಾರ ಬೇಕಾಗಬಹುದು ಎನ್ನಲಾಗಿದೆ.
ಬೆಸ್ಕಾಂ ಉದ್ಯೋಗಿ ರಾಮಚಂದ್ರ ಶೆಟ್ಟಿ ಪತ್ನಿ ಲೀಲಾವತಿ ತಮ್ಮ ಸಂಬಂಧಿಕರೊಂದಿಗೆ ಉತ್ತರಾಖಂಡ ಯಾತ್ರೆಗೆ ಹೋಗಿದ್ದು, ಜಲಪ್ರಳಯ ಹೆಚ್ಚಾದ ಕಾರಣ ಹೃಷಿಕೇಶ ಸಮೀಪದ ಶಿವಾನಂದ ಆಶ್ರಮದಲ್ಲಿ ತಂಗಿದ್ದಾರೆ. ಇವರೂ ಸಹ ಮಳೆ ಕಡಿಮೆಯಾಗಿದ್ದರೂ ರಸ್ತೆ ಸಂಪರ್ಕ ಇಲ್ಲದೆ ಊರಿಗೆ ಹಿಂದಿರುಗುವುದು ವಿಳಂಬವಾಗುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.