ADVERTISEMENT

ಕೂಲಿಕಾರನ ಪುತ್ರನಿಗೆ ವೈದ್ಯನಾಗುವ ಆಸೆ

ಸಹಾಯದ ನಿರೀಕ್ಷೆಯಲ್ಲಿ ಪ್ರತಿಭಾವಂತ ಪವನ್ ಹೂಗಾರ

​ಪ್ರಜಾವಾಣಿ ವಾರ್ತೆ
Published 10 ಮೇ 2014, 19:30 IST
Last Updated 10 ಮೇ 2014, 19:30 IST
ಕೂಲಿಕಾರನ ಪುತ್ರನಿಗೆ ವೈದ್ಯನಾಗುವ ಆಸೆ
ಕೂಲಿಕಾರನ ಪುತ್ರನಿಗೆ ವೈದ್ಯನಾಗುವ ಆಸೆ   

ಭಾಲ್ಕಿ: ಅಜ್ಜಿ ಗಂಗವ್ವನ ಗುಡಿಸಲಿನಲ್ಲಿ ವಾಸ. ಊರಿನ ಮನೆ ಮನೆಗೆ ಹೂ ನೀಡುವುದು ನಿತ್ಯದ ಕಾಯಕ. ವರ್ಷ ಪೂರ್ತಿ ಹೂ ನೀಡಿದರೂ    ಕಾಸು ಇಲ್ಲ. ಹೊಲದಲ್ಲಿ ಧಾನ್ಯಗಳ ರಾಶಿ ಮಾಡು­ವಾಗ ನೀಡುವ ಉಂಬಳಿಯೇ ಈ ಕುಟುಂಬದ ವಾರ್ಷಿಕ ಆದಾಯ.

ಇದು ಪಿಯುಸಿ ವಿಜ್ಞಾನ ವಿಭಾಗ­ದಲ್ಲಿ ಶೇ  95 ಅಂಕ ಗಳಿಸಿರುವ ಭಾಲ್ಕಿ ಚನ್ನ­ಬಸವೇಶ್ವರ ಗುರು­ಕುಲದ ವಿದ್ಯಾರ್ಥಿ ಪವನ್‌ ಹೂಗಾರ ಮನೆಯ ಸ್ಥಿತಿ. 
ಊರಲ್ಲಿ ಸ್ವಂತ ಮನೆ ಇಲ್ಲ. ದುಡಿಯ­ಬೇಕೆಂದರೆ ಗುಂಟೆಯಷ್ಟು ಜಮೀನೂ ಇಲ್ಲ. ಕಡು ಬಡತನದಲ್ಲೇ ಬದುಕು­ತ್ತಿದ್ದರೂ ಪವನ್‌ ಕಾಶಪ್ಪ ಹೂಗಾರ ಅವರಲ್ಲಿ ಓದುವ ಉತ್ಸಾಹ­­ಕ್ಕೇನೂ ಕೊರತೆ ಇಲ್ಲ. ಕುಟುಂಬದ ಸಂಕಷ್ಟಮಯ ಪರಿಸ್ಥಿತಿಯಲ್ಲೂ ಉತ್ತಮ ಅಂಕಗಳನ್ನು ಗಳಿಸಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಗೋರ್ಟಾ ಗ್ರಾಮದಲ್ಲಿ ಪಾಳು ಬಿದ್ದ ಗೋಡೆ­ಗಳ ಹಿಂದೆ ತಗಡುಗಳಿಂದ ನಿರ್ಮಿಸಿದ ತಾತ್ಕಾಲಿಕ ಆಸರೆಯಲ್ಲಿ ಅಜ್ಜಿ ಗಂಗಮ್ಮ ಮತ್ತು ತಾಯಿ ಸುಭದ್ರಾ, ತಂದೆ ಕಾಶಪ್ಪ ಅವರೊಂದಿಗೆ ಪವನ್‌ ವಾಸ.

ಕಡು ಬಡತನದಲ್ಲಿದ್ದರೂ ಅನೇಕರ ಸಹಕಾರ ಈ ಫಲಿತಾಂಶಕ್ಕೆ ಕಾರಣ­ವಾಗಿದೆ ಎನ್ನುತ್ತಾರೆ. ಗ್ರಾಮದ ಗೋರ­ಖ­ನಾಥ ಶಾಲೆಯಲ್ಲಿ 7ನೇ ತರಗತಿ, ಗುರು­ಪಾದ ಶಿವಾಚಾರ್ಯ ಶಾಲೆ­ಯಲ್ಲಿ ಎಸ್ಸೆಸ್ಸೆಲ್ಸಿ ಓದಿ ಶೇ 92 ರಷ್ಟು ಅಂಕ ಗಳಿಸಿದ್ದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾ­ಧಿಪತಿ ಡಾ. ಬಸವಲಿಂಗ ಪಟ್ಟ­ದ್ದೇವರು ಅವರು ಚನ್ನಬಸವೇಶ್ವರ ಗುರು­­ಕುಲದಲ್ಲಿ ಪವನ್‌ಗೆ ಆಶ್ರಯ ನೀಡಿ, ಉಚಿತ ಪ್ರವೇಶ ಕೊಡಿಸಿದ್ದಾರೆ.

‘ಗುರು­­ಗಳು ಕೊಟ್ಟ ಅವಕಾಶವನ್ನು ಸದ್ಬ­ಳಕೆ ಮಾಡಿ ಉತ್ತಮ ಫಲಿತಾಂಶ ತಂದಿ­­ದ್ದಾನೆ’ ಎನ್ನುತ್ತಾರೆ ಪವನ್‌ರನ್ನು ಗುರು­ಕುಲಕ್ಕೆ ಪರಿಚಯಿಸಿದ ಉಪ­ನ್ಯಾಸಕ ಅಂಕುಶ ಢೋಲೆ.

ಪವನ್‌ಗೆ ವೈದ್ಯನಾಗಬೇಕು ಎನ್ನುವ ಹಂಬಲವಿದೆ. ಆದರೆ ಅಷ್ಟೊಂದು ಹಣ ಹೊಂದಿಸುವುದು ಹೇಗೆ? ಎನ್ನುವ ಚಿಂತೆ ಪಾಲಕರದ್ದು. ಬಡತನದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾ­ಗಿ­­ರುವಾಗ ಮಗನನ್ನು ಅಪಾರ ಹಣ ಖರ್ಚು ಮಾಡಿ ಓದಿಸುವುದನ್ನು ಕಲ್ಪನೆ ಮಾಡಿ­ಕೊಳ್ಳಲೂ ಆಗುತ್ತಿಲ್ಲ ಎನ್ನು­ತ್ತಾರೆ ಪೋಷಕರಾದ  ಸುಭದ್ರಾ­ಬಾಯಿ, ಕಾಶಪ್ಪ. 

ಪವನ್‌ ಹೆಸರಿನಲ್ಲಿ ಎಸ್‌ಬಿಎಚ್ ಬ್ಯಾಂಕ್‌ ಖಾತೆಯನ್ನು ತೆರೆಯಲಾಗಿದೆ: ಪವನ್‌ ಹೂಗಾರ್‌– ಖಾತೆ ಸಂಖ್ಯೆ: 62342488350. (ಮೊಬೈಲ್‌: 9980932060).
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.