ADVERTISEMENT

ಕೃಷಿ ಪಂಡಿತ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2013, 19:59 IST
Last Updated 28 ಜನವರಿ 2013, 19:59 IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 2011-12ನೇ ಸಾಲಿನ ಕೃಷಿ ಪಂಡಿತ ಹಾಗೂ ವಿವಿಧ ಬೆಳೆ ಸ್ಪರ್ಧೆಯ ಪ್ರಶಸ್ತಿ ಪಡೆದ ರೈತರೊಂದಿಗೆ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡ, ಶಾಸಕ ಅಭಯ ಪಾಟೀಲ, ಸಂಸದ ಸುರೇಶ್ ಅಂಗಡಿ, ಶಾಸಕ ಆನಂದ್ ಮಾಮನಿ ಚಿತ್ರದಲ್ಲಿ ಇದ್ದಾರೆ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 2011-12ನೇ ಸಾಲಿನ ಕೃಷಿ ಪಂಡಿತ ಹಾಗೂ ವಿವಿಧ ಬೆಳೆ ಸ್ಪರ್ಧೆಯ ಪ್ರಶಸ್ತಿ ಪಡೆದ ರೈತರೊಂದಿಗೆ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡ, ಶಾಸಕ ಅಭಯ ಪಾಟೀಲ, ಸಂಸದ ಸುರೇಶ್ ಅಂಗಡಿ, ಶಾಸಕ ಆನಂದ್ ಮಾಮನಿ ಚಿತ್ರದಲ್ಲಿ ಇದ್ದಾರೆ   

ಬೆಳಗಾವಿ: ರಾಜ್ಯದಲ್ಲಿ ಸಾಧನೆಗೈದ ರೈತರಿಗೆ ಕೃಷಿ ಇಲಾಖೆಯಿಂದ 2011-12ನೇ ಸಾಲಿನ ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿಯನ್ನು ಇಲ್ಲಿನ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್‌ನಲ್ಲಿ ಸೋಮವಾರ ಪ್ರದಾನ ಮಾಡಲಾಯಿತು.

ಸಾವಯವ ಕೃಷಿ ಹಾಗೂ ಸಮಗ್ರ ಕೃಷಿ ಪದ್ಧತಿ, ಬೆಳೆ ಪದ್ಧತಿ ಹಾಗೂ ಬೆಳೆ ವೈವಿಧ್ಯ ಕೃಷಿ ಪಂಡಿತ ಪ್ರಶಸ್ತಿ ವಿಭಾಗದಲ್ಲಿ ಇಬ್ಬರಿಗೆ ದ್ವಿತೀಯ (ರೂ. 50,000) ಹಾಗೂ 20 ರೈತರಿಗೆ ತೃತೀಯ (ರೂ. 25,000) ಬಹುಮಾನ ವಿತರಿಸಲಾಯಿತು. ಬತ್ತ, ಮುಸುಕಿನ ಜೋಳ, ರಾಗಿ, ಶೇಂಗಾ, ಗೋಧಿ ಹಾಗೂ ಕಬ್ಬು ಬೆಳೆ ಸ್ಪರ್ಧೆ ವಿಭಾಗದಲ್ಲಿ ಒಟ್ಟು 18 ರೈತರಿಗೆ ಬಹುಮಾನಗಳನ್ನು ನೀಡಲಾಯಿತು. ಪ್ರಶಸ್ತಿ ಫಲಕ, ರೇಷ್ಮೆ ಗೂಡಿನ ವಿಶೇಷ ಹಾರ, ನಗದು ಬಹುಮಾನಗಳನ್ನು ಸಂಸದ ಸುರೇಶ ಅಂಗಡಿ ಪ್ರದಾನ ಮಾಡಿದರು.


ಸನ್ಮಾನಿತರ ಪರವಾಗಿ ಮಾತನಾಡಿದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಮುದ್ದೇಬಿಹಾಳದ ಡಾ. ಎಂ.ಆರ್. ನಾಡಗೌಡರ, `ಸರ್ಕಾರವು ಪ್ರತಿ ಹೋಬಳಿ ಮಟ್ಟದಲ್ಲಿ ರೈತರ ಯಶೋಗಾಥೆಗಳ ಮಾದರಿ ಹಾಗೂ ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ಮಾಡುವ ಮೂಲಕ ರೈತರಿಗೆ ಮಾರ್ಗದರ್ಶನ ಮಾಡಬೇಕು.

ನೀರು ನಿರ್ವಹಣೆ, ಕಟಾವಿನಲ್ಲಿನ  ತಾಂತ್ರಿಕತೆ, ಬೆಳೆ ಸಂಸ್ಕರಣೆ ಕುರಿತು ತರಬೇತಿ ಕೊಡಬೇಕು. ಸರ್ಕಾರ ಮತ್ತು ರೈತರ ನಡುವಿನ ಕೊಂಡಿ ಸರಿಪಡಿಸುವ ಮೂಲಕ ಸರ್ಕಾರಿ ಯೋಜನೆಗಳು ರೈತರನ್ನು ತಲುಪುವಂತೆ ಮಾಡಬೇಕು. ಆಹಾರ ಧಾನ್ಯ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಬೇಕು' ಎಂದು ಸಲಹೆ ನೀಡಿದರು.

ಕೊಪ್ಪಳದ ಕಲ್ಲತಾವರಗೇರಿಯ ಶೇಖಮ್ಮ ಹುಚ್ಚಪ್ಪ ವಾಣಿ ಅವರು ಪತಿಯ ಸಹಕಾರದಲ್ಲಿ ಕಲ್ಲು ಬಂಡೆಯ ಜಮೀನಿನ ಮೇಲೆ ಮಣ್ಣು ಹಾಕಿ ಕೃಷಿ ಕೈಗೊಂಡು ಯಶಸ್ವಿಯಾದ ತಮ್ಮ ಯಶೋಗಾಥೆ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT