ಧಾರವಾಡ: ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಪೀಠ ಸ್ಥಾಪನೆಗೆ ಒತ್ತಾಯಿಸಿ ಏಳು ದಿನಗಳಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ವಕೀಲರ ಸಂಘದ ಅಧ್ಯಕ್ಷ ಬಿ.ಡಿ.ಹಿರೇಮಠ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಭರವಸೆ ಹಿನ್ನೆಲೆಯಲ್ಲಿ ಶನಿವಾರ ಅಂತ್ಯವಾಯಿತು.
ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಜಯಚಂದ್ರ, ‘ಕೆಎಟಿಯಲ್ಲಿ ಸುಮಾರು 25,000 ಪ್ರಕರಣಗಳು ಬಾಕಿ ಇವೆ. ಈ ಪೈಕಿ ಸುಮಾರು ಐದು ಸಾವಿರ ಪ್ರಕರಣಗಳು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿವೆ. ಸದ್ಯ ಎರಡು ಪೀಠಗಳ ಅವಶ್ಯಕತೆ ಇದ್ದು, ಒಂದನ್ನು ಧಾರವಾಡದಲ್ಲಿ ಸ್ಥಾಪಿಸುವುದಾಗಿ ಭರವಸೆ ನೀಡಿದರು.
ಈ ಕುರಿತು ತಾವು ವಿಧಾನಸಭೆಯಲ್ಲಿ ಉತ್ತರ ನೀಡಿದ್ದು, ನಾಳೆ (ಭಾನುವಾರ) ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು, ಅನುಷ್ಠಾನಗೊಳಿಸಲಾಗುವುದು. ಯಾವುದೇ ಸಂದೇಹ ಬೇಡ. ಕೆಎಟಿ ಪೀಠ ಸ್ಥಾಪನೆ ಈ ಭಾಗದ ನ್ಯಾಯಯುತ ಬೇಡಿಕೆ. ಜೊತೆಗೆ ಈ ಭಾಗಕ್ಕೆ ನ್ಯಾಯಯುತವಾಗಿ ಏನು ಬರಬೇಕೋ ಅದನ್ನು ದೊರಕಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದರು.
ಸಚಿವರು ಹಿರೇಮಠ ಅವರಿಗೆ ಎಳನೀರು ಕುಡಿಸುವ ಮೂಲಕ ಸತ್ಯಾಗ್ರಹ ಅಂತ್ಯಗೊಳಿಸಿದರು. ನಂತರ ಪ್ರತಿಕ್ರಿಯಿಸಿದ ಹಿರೇಮಠ, ‘ಕಾನೂನು ಸಚಿವರು ಪೀಠ ಸ್ಥಾಪನೆ ಭರವಸೆ ನೀಡಿದ್ದಾರೆ. ಆ ಭರವಸೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸತ್ಯಾಗ್ರಹ ಹಿಂತೆಗೆದುಕೊಂಡಿದ್ದೇವೆ. 3 ತಿಂಗಳೊಳಗೆ ಭರವಸೆ ಅನುಷ್ಠಾನಗೊಳ್ಳದಿದ್ದರೆ ಮತ್ತೆ ಸತ್ಯಾಗ್ರಹ ಪುನರಾರಂಭಿಸುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.