ADVERTISEMENT

ಕೆಎಸ್ಆರ್‌ಟಿಸಿಯಿಂದ ‘ಬಸ್ ಮಿತ್ರ’ ಪರಿಚಯ

ವಾಹನಗಳ ಸಂಚಾರಕ್ಕೆ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2017, 19:30 IST
Last Updated 3 ನವೆಂಬರ್ 2017, 19:30 IST
ಸಂಚಾರಕ್ಕೆ ಸಿದ್ಧಗೊಂಡಿರುವ ‘ಬಸ್ ಮಿತ್ರ’ ವಾಹನಗಳು‌  –ಪ್ರಜಾವಾಣಿ ಚಿತ್ರ
ಸಂಚಾರಕ್ಕೆ ಸಿದ್ಧಗೊಂಡಿರುವ ‘ಬಸ್ ಮಿತ್ರ’ ವಾಹನಗಳು‌ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳು ಅಪಘಾತಕ್ಕೀಡಾದ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆಗೆ ಹೊಸದಾಗಿ ‘ಬಸ್ ಮಿತ್ರ’ ವಾಹನಗಳನ್ನು ಪರಿಚಯಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.

‌ಕೆಎಸ್‌ಆರ್‌ಟಿಸಿ ಕೇಂದ್ರೀಯ 3ನೇ ಘಟಕದ ಆವರಣದಲ್ಲಿ 45 ‘ಬಸ್ ಮಿತ್ರ’ ವಾಹನಗಳ (ಮಹೀಂದ್ರ ಬೊಲೇರೊ ಜೀಪುಗಳು) ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

‘ನಿಗಮದ ಎಲ್ಲಾ ವಿಭಾಗಗಳಿಗೆ ತಲಾ ಎರಡು ಅಥವಾ ಮೂರು ವಾಹನಗಳನ್ನು ನೀಡಲಾಗುವುದು. ತರಬೇತಿ ಪಡೆದ ಸಿಬ್ಬಂದಿ ತಂಡ ಮತ್ತು ಪ್ರಥಮ ಚಿಕಿತ್ಸೆಗೆ ಬೇಕಿರುವ ಸಲಕರಣೆಗಳ ಇದರಲ್ಲಿ ಇರಲಿವೆ. ಅಪಘಾತ ನಡೆದ ಸ್ಥಳಕ್ಕೆ ತಕ್ಷಣವೇ ತೆರಳುವ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಸಾಗಿಸುತ್ತಾರೆ’ ಎಂದು ಹೇಳಿದರು.

ADVERTISEMENT

‘ಆರೋಗ್ಯ ಇಲಾಖೆಯ ಆಂಬುಲೆನ್ಸ್‌ಗಳು ಅಪಘಾತ ನಡೆದ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿವೆ. ನಿಗಮದಲ್ಲೂ ಪ್ರತ್ಯೇಕ ತಂಡವೊಂದು ಪ್ರಯಾಣಿಕರ ರಕ್ಷಣೆ ಕೆಲಸ ಮಾಡಲಿದೆ. ₹ 3.52 ಕೋಟಿ ವೆಚ್ಚದಲ್ಲಿ 45 ವಾಹನಗಳನ್ನು ಖರೀದಿಸಲಾಗಿದೆ’ ಎಂದು ವಿವರಿಸಿದರು.

‘ಟಿಕೆಟ್‌ ಬುಕ್ಕಿಂಗ್‌ಗೆ ಇರುವ ಆನ್‌ಲೈನ್ ವ್ಯವಸ್ಥೆ ರದ್ದು ಮಾಡುವ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಇದು ಕೇವಲ ವದಂತಿ ಅಷ್ಟೆ. ಆನ್‌ಲೈನ್‌ನಲ್ಲಿ ಇನ್ನಷ್ಟು ಸೇವೆ ಒದಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.