ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ಕೆಜೆಪಿ ಕಟ್ಟಿದರೂ ಅವರ ಆಸ್ತಿಯೇನೂ ಕರಗಿಲ್ಲ!
ಕೆಜೆಪಿಯಿಂದ ಬಿಜೆಪಿಗೆ ಬರುವಷ್ಟರ ಒಳಗೆ ಅವರ ಆದಾಯ ಸುಮಾರು ₨ 1ಕೋಟಿ ಹೆಚ್ಚಾಗಿದೆ. ಗುರುವಾರ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಈ ಅಂಶ ದಾಖಲಾಗಿದೆ. 2013ರಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಿದ್ದ ಯಡಿಯೂರಪ್ಪ ಅವರ ಆಗಿನ ಆಸ್ತಿ ₨5,96,86,750 ಇತ್ತು. ಈಗ ಅದು ₨6,97,46,267 ಏರಿಕೆಯಾಗಿದೆ.
2013ರಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಕ್ರಮ ಜಮೀನು ಡಿನೋಟಿಫಿಕೇಷನ್ ಸೇರಿದಂತೆ ಒಟ್ಟು 17 ಪ್ರಕರಣಗಳನ್ನು ಎದುರಿಸುತ್ತಿದ್ದ ಯಡಿಯೂರಪ್ಪ, 2014 ಹೊತ್ತಿಗೆ ಅವರು ಎದುರಿಸುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಕೇವಲ 3 ಮಾತ್ರ ಪರಿಹಾರ ಕಂಡಿವೆ. ಯಡಿಯೂರಪ್ಪ ಸಣ್ಣ ಮಗ ಬಿ.ವೈ.ವಿಜಯೇಂದ್ರನಿಗೆ ₨30 ಲಕ್ಷ ಸಾಲ ನೀಡಿದರೆ, ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರನಿಗೆ ₨17 ಲಕ್ಷ ಸಾಲ ನೀಡಿದ್ದಾರೆ.
₨4,90,12,820 ಸ್ಥಿರಾಸ್ತಿ ಹೊಂದಿರುವ ಬಿಎಸ್ವೈ ಅವರಿಗೆ ಶಿಕಾರಿಪುರದ ಚೆನ್ನಹಳ್ಳಿಯಲ್ಲಿ ₨11.09ಲಕ್ಷ ಮೌಲ್ಯದ ಕೃಷಿ ಜಮೀನು ಇದೆ. ಬೆಂಗಳೂರು ಸಮೀಪದ ₨1.47ಕೋಟಿ ಮೌಲ್ಯದ ಕೃಷಿಯೇತರ ಭೂಮಿ, ಬೆಂಗಳೂರಿನಲ್ಲೇ ₨3ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ.
ಯಡಿಯೂರಪ್ಪ ಅವರ ಚರಾಸ್ತಿ ₨2,07,33,447 ಮೌಲ್ಯದ್ದು ಇದೆ. ಇದರಲ್ಲಿ ₨71,68,586 ಮೌಲ್ಯದ ಬಂಗಾರ, ₨41,55,200 ಮೌಲ್ಯದ ಬೆಳ್ಳಿ ಆಭರಣ ಹೊಂದಿದ್ದಾರೆ. ನಗದು ₨7,71,000 ಹೊಂದಿರುವ ಯಡಿಯೂರಪ್ಪ, ವಿವಿಧ ಬ್ಯಾಂಕ್ಗಳಲ್ಲಿ ₨18,70,247 ಠೇವಣಿ ಇಟ್ಟಿದ್ದಾರೆ. 2008ರಲ್ಲಿ ಶಿಕಾರಿಪುರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಯಡಿಯೂರಪ್ಪ ಅವರ ಆಸ್ತಿ ಆಗ ಕೇವಲ ₨1.82 ಕೋಟಿ ಮಾತ್ರ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.