ADVERTISEMENT

ಕೆಪಿಎಸ್‌ಸಿ ಅವ್ಯವಹಾರ: ಸಿಗದ ನಿರೀಕ್ಷಣಾ ಜಾಮೀನು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 20:05 IST
Last Updated 19 ಸೆಪ್ಟೆಂಬರ್ 2011, 20:05 IST

ಬೆಂಗಳೂರು: ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ (ಗ್ರೂಪ್ ಎ ಮತ್ತು ಬಿ) ಭರ್ತಿಗೆ ಕರ್ನಾಟಕ ಲೋಕ ಸೇವಾ ಆಯೋಗವು 1998, 1999 ಹಾಗೂ 2004ರಲ್ಲಿ ನಡೆಸಿರುವ ಪರೀಕ್ಷೆಗಳಲ್ಲಿ ನಡೆದ ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಹೊತ್ತ ಆಯೋಗದ ಮಾಜಿ ಅಧ್ಯಕ್ಷ (ಮಾಹಿತಿ ಹಕ್ಕು ಆಯೋಗದ ಹಾಲಿ ಆಯುಕ್ತ) ಡಾ. ಎಚ್.ಎನ್.ಕೃಷ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

ಇದೇ ವಿವಾದಕ್ಕೆ ಸಂಬಂಧಿಸಿದಂತೆ ನಕಲಿ ಜಾತಿ ಪ್ರಮಾಣಪತ್ರ ನೀಡಿ ಆಯ್ಕೆಯಾಗಿರುವ ಆರೋಪ ಹೊತ್ತ ವೈ.ಬಿ.ಅರ್ಚನಾ, ಎಸ್.ಎಂ.ಆಶಾ ಪರ್ವೀನ್ ಹಾಗೂ ಸಲ್ಮಾ ಫಿರ್ದೋಸ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಆದೇಶಿಸಿದ್ದಾರೆ.

ಆರೋಪದ ಕುರಿತಾಗಿ ತನಿಖೆ ನಡೆಸುತ್ತಿರುವ ಸಿಐಡಿ ನೀಡಿರುವ ವರದಿಯಲ್ಲಿ ಇವರ ಹೆಸರು ಇರುವ ಹಿನ್ನೆಲೆಯಲ್ಲಿ ಪೊಲೀಸರು ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂಬ ಭಯದಿಂದ ಎಲ್ಲರೂ ನಿರೀಕ್ಷಣಾ ಜಾಮೀನು ಕೋರ್ದ್ದಿದರು.

ನಕಾರಕ್ಕೆ ಕಾರಣ: ಆರೋಪಿಗಳು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಮಾರು ಎರಡೂವರೆ ಗಂಟೆಗಳ ಕಾಲ ತೀರ್ಪಿನ ಉಕ್ತಲೇಖನ (ಡಿಕ್ಟೇಷನ್) ನೀಡಿದ ನ್ಯಾಯಮೂರ್ತಿಗಳು, `ಕೃಷ್ಣ ಅವರ ವಿರುದ್ಧ ಭ್ರಷ್ಟಾಚಾರ, ಅವ್ಯವಹಾರ, ಸ್ವಜನ ಪಕ್ಷಪಾತ ಸೇರಿದಂತೆ ಇನ್ನೂ ಕೆಲವು ಗಂಭೀರ ಸ್ವರೂಪದ ಆರೋಪಗಳಿವೆ.

ಅವ್ಯವಹಾರದ ಆರೋಪಗಳಿಗೆ ಸಂಬಂಧಿಸಿದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟೇ ಅಲ್ಲದೇ ಹೈಕೋರ್ಟ್‌ನಿಂದಲೇ ತನಿಖೆಗೆ ಆದೇಶಿಸಲಾಗಿದೆ. ಈ ವಿವಾದದಲ್ಲಿ ಸಾರ್ವಜನಿಕ ಹಿತಾಸಕ್ತಿ ಕೂಡ ಅಡಗಿದೆ.

ಅಧಿಕಾರಿಗಳು ಹಾಗೂ ಅಧಿಕಾರೇತರರು ಶಾಮೀಲಾಗಿರುವ ಆರೋಪ ಇರುವ ಕಾರಣ, ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಮಾನ್ಯ ಮಾಡಲಾಗದು~ ಎಂದಿದ್ದಾರೆ. `ಆದರೆ ಉಳಿದ ಮೂವರು ಆರೋಪಿಗಳು ಕರ್ತವ್ಯದಲ್ಲಿದ್ದಾರೆ. ಈ ಹಂತದಲ್ಲಿ ಅವರಿಗೆ ಜಾಮೀನು ನಿರಾಕರಿಸುವುದು ಸರಿಯಲ್ಲ~ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಆದರೆ ಇವರಿಗೆ ಒಂದು ಲಕ್ಷ ರೂಪಾಯಿ ಬಾಂಡ್, ಇದೇ ಮೊತ್ತದ ಎರಡು ಜಾಮೀನು ನೀಡುವಂತೆ, 10 ದಿನಗಳ ಒಳಗೆ ತನಿಖಾಧಿಕಾರಿ ಮುಂದೆ ಹಾಜರು ಆಗುವಂತೆ, ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸದಂತೆ, ದೇಶ ಬಿಟ್ಟು ಹೋಗದಂತೆ, ಬೇರೆ ಊರುಗಳಿಗೆ ಹೋಗುವಾಗ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಅನುಮತಿ ಪಡೆದುಕೊಳ್ಳುವಂತೆ ಷರತ್ತು ವಿಧಿಸಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.