ADVERTISEMENT

ಕೆರೆಯಲ್ಲಿ ಮರಿ ರಕ್ಷಣೆಗೆ ಆನೆಗಳ ಯತ್ನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST

ಯಳಂದೂರು: ತಾಲ್ಲೂಕಿನ ಬಿಆರ್‌ಟಿ ವನ್ಯಧಾಮದ ವ್ಯಾಪ್ತಿಯಲ್ಲಿರುವ ನಿಂಗಣ್ಣಯ್ಯನ ಕಟ್ಟೆ ಬಳಿ ಮರಿಯಾನೆ ಮೃತಪಟ್ಟ ಹಿನ್ನೆಲೆಯಲ್ಲಿ ತಾಯಿ ಆನೆ ಜತೆ ಮತ್ತೊಂದು ಆನೆ ಸ್ಥಳದಲ್ಲೇ ಮೊಕ್ಕಾಂ ಹೂಡಿ, ಬಿಳಿಗಿರಿರಂಗನ ಬೆಟ್ಟದಿಂದ ಬಾಗಲಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಡ್ಡಗಟ್ಟಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಶನಿವಾರ ನಡೆದಿದೆ.

ಘಟನೆ ವಿವರ: ನಿಂಗಣ್ಣಯ್ಯನ ಕಟ್ಟೆಯಲ್ಲಿರುವ ಕೆಸರಿಗೆ ಸಿಲುಕಿ ಶುಕ್ರ­ವಾರ ರಾತ್ರಿಯೇ ಮರಿಯಾನೆ ಸಾವನ್ನಪ್ಪಿರುವ ಶಂಕೆ ಇದೆ. ಶನಿವಾರ ಮುಂಜಾ­ನೆ­ಯಿಂದಲೂ ಕೆರೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತಾಯಿ ಆನೆ ಮೃತಪಟ್ಟ ಕಂದನನ್ನು ಕಾಲಲ್ಲಿ ತಳ್ಳುತ್ತಾ ತಂದಿದೆ. ಇದರ ಜೊತೆಗೆ ಮತ್ತೊಂದು ಆನೆಯೂ ಸೇರಿಕೊಂಡು ಮರಿಯಾನೆ ಜೀವಂತವಾಗಿದೆ ಎಂಬ ಭಾವನೆಯಲ್ಲಿ ಅದನ್ನು ಎಚ್ಚರಿಸುವ ಪ್ರಯತ್ನ ಮಾತೃ ಹೃದಯಕ್ಕೆ ಹಿಡಿದ ಕನ್ನಡಿಯಾಗಿತ್ತು.

ಸಂಚಾರ ಅಸ್ತವ್ಯಸ್ತ:  ಯಳಂದೂರಿ­ನಿಂದ­ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ಮಾರ್ಗದಲ್ಲೇ ಈ ಕಟ್ಟೆ ಇದೆ. ಆದರೆ,  ಮರಿ ಸತ್ತಿರುವುದರಿಂದ ವಿಚಲಿತವಾದ ಎರಡೂ ಆನೆಗಳು ರಸ್ತೆಯನ್ನೇ ಅಡ್ಡಗಟ್ಟಿ ನಿಂತಿದ್ದರಿಂದ ಸಂಜೆ ತನಕವೂ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳ­ದಲ್ಲೇ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರು ಜನರನ್ನು ನಿಯಂತ್ರಿಸಿದರು. ಸಂಜೆ ಕೆ. ಕುಡಿಯಿಂದ ಬಂದ ಸಾಕಾನೆಯ ನೆರವಿ­ನಿಂದ ತಾಯಿ ಆನೆಯ ಬಳಗವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಳುಹಿಸುವಲ್ಲಿ ಸಫಲರಾದರು.

ಅರಣ್ಯ ಇಲಾಖೆಯ ಎಸಿಎಫ್‌ ತಮ್ಮಯ್ಯ, ವಲಯ ಅರಣ್ಯ ಅಧಿಕಾರಿ ದಿನೇಶ್‌, ಅರಣ್ಯ ರಕ್ಷಕರಾದ ಮೂರ್ತಿ, ರಮೇಶ್‌, ಅರಣ್ಯ ವೀಕ್ಷರಾದ ರಾಜಣ್ಣ­ಹಾಗೂ ಪೊಲೀಸ್‌ ಇಲಾಖೆಯ ಸಿಪಿಐ ಕೀರ್ತಿಕುಮಾರ್‌ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.