ಬೆಂಗಳೂರು: ಕೈಗಾರಿಕೆಗಳಿಗೆ ವಾಸ್ತವವಾಗಿ ಅಗತ್ಯ ಇರುವಷ್ಟು ಭೂಮಿಯನ್ನು ಮಾತ್ರ ಹಂಚಿಕೆ ಮಾಡಬೇಕು. ಈ ಸಂಬಂಧ ನಿಖರವಾದ ಪ್ರಸ್ತಾವನೆಗಳನ್ನು ಉನ್ನತಾಧಿಕಾರ ಸಮಿತಿಯ ಮುಂದಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಸೋಮವಾರ ಕರೆಯಲಾಗಿದ್ದ ಉನ್ನತಾಧಿಕಾರ ಸಮಿತಿಯ ಸಭೆಯನ್ನು ಈ ಕಾರಣಕ್ಕಾಗಿಯೇ ಅವರು ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಮುಂದೂಡಿದರು ಎನ್ನಲಾಗಿದೆ.
ಬಂಡವಾಳ ಹೂಡಲು ಆಸಕ್ತಿ ತೋರಿರುವ ಸಂಸ್ಥೆಗಳು, ನೂರಾರು ಎಕರೆ ಜಮೀನಿಗೆ ಬೇಡಿಕೆ ಇಟ್ಟಿದ್ದವು. ಈ ಕುರಿತ ಪ್ರಸ್ತಾವನೆಗಳು ಸಭೆಯಲ್ಲಿ ಚರ್ಚೆಗೆ ಬಂದ ತಕ್ಷಣ ಸಿದ್ದರಾಮಯ್ಯ ಸಿಟ್ಟಾದರು ಎಂದು ಗೊತ್ತಾಗಿದೆ.
ಐ.ಟಿ ಉದ್ಯಮ ಸ್ಥಾಪನೆಗೆ ಸಾವಿರಾರು ಎಕರೆ ಜಾಗದ ಅಗತ್ಯ ಏನಿದೆ? 500-1000 ಮಂದಿ ಕೆಲಸ ಮಾಡುವುದಕ್ಕೆ 10-15 ಎಕರೆ ಜಾಗ ಸಾಕಾಗುವುದಿಲ್ಲವೇ ಎಂದು ಏರುಧ್ವನಿಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು ಎನ್ನಲಾಗಿದೆ.
`ಈಗಲೇ ಕೆ.ಜಿ ಅಕ್ಕಿ ಬೆಲೆ 50 ರೂಪಾಯಿ ದಾಟಿದೆ. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂತಹ ಸನ್ನಿವೇಶದಲ್ಲಿ ನೂರಾರು ಎಕರೆ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ನೀಡಿದರೆ ದೇಶದ ಗತಿ ಏನಾಗುವುದಿಲ್ಲ? ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು' ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು ಎಂದು ಗೊತ್ತಾಗಿದೆ.
`ಉದ್ಯಮ ಸಂಸ್ಥೆಗಳ ಜಮೀನಿನ ಬೇಡಿಕೆ ಬಗ್ಗೆ ಪುನರ್ ಪರಿಶೀಲಿಸಬೇಕು. ವಾಸ್ತವವಾಗಿ ಎಷ್ಟು ಜಮೀನು ಬೇಕಾಗುತ್ತದೆ ಎಂಬುದನ್ನು ಅಧ್ಯಯನ ಮಾಡಿ ವರದಿ ನೀಡಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿದರು ಎನ್ನಲಾಗಿದೆ.
`ಭೂಬ್ಯಾಂಕ್ನಲ್ಲಿ ಎಷ್ಟು ಭೂಮಿ ಇದೆ ಎಂಬುದನ್ನು ಮೊದಲು ನೋಡಿ. ಅದರಿಂದ ಈಗ ಬರುವ ಉದ್ದಿಮೆದಾರರಿಗೆ ಜಮೀನು ನೀಡಲು ಸಾಧ್ಯವಾದರೆ ಅದನ್ನು ಮಾಡೋಣ. ಆದರೆ, ಹೊಸದಾಗಿ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳುವುದು ಮಾತ್ರ ಬೇಡ' ಎಂದು ಸ್ಪಷ್ಟವಾಗಿ ಹೇಳಿದರು ಎಂದು ಗೊತ್ತಾಗಿದೆ.
ಕೆಐಎಡಿಬಿ ತನ್ನ ಕರ್ತವ್ಯ ಬಿಟ್ಟು ರಿಯಲ್ ಎಸ್ಟೇಟ್ ಕೆಲಸಕ್ಕೆ ಇಳಿದಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಮುಖ್ಯಮಂತ್ರಿಯವರ ಮಾತಿನ ಧಾಟಿ ನೋಡಿ ಕಂಗಾಲಾದ ಅಧಿಕಾರಿಗಳು ಉದ್ಯಮಿಗಳ ಜತೆ ಸಭೆ ನಡೆಸಲು ಉದ್ದೇಶಿಸಿದ್ದನ್ನು ತಕ್ಷಣ ರದ್ದುಪಡಿಸಿದರು. ಮುಖ್ಯಮಂತ್ರಿ ಕಚೇರಿ ಹೊರಗೆ ಕಾಯುತ್ತಿದ್ದ ಉದ್ಯಮಿಗಳಿಗೆ ಸಭೆ ಮುಂದೂಡಲಾಗಿದೆ ಎಂದು ಹೇಳಿ ಅಲ್ಲಿಂದ ಹೊರನಡೆದರು ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.