
ಬೆಂಗಳೂರು: ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗುವ ಕೈದಿಗಳಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಕಾರಾಗೃಹಗಳ ಇಲಾಖೆ ‘ರೂಪಾಂತರ’ ಎನ್ನುವ ಕಾರ್ಯಕ್ರಮ ಜಾರಿಗೆ ತಂದಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗಳ ಅವಧಿಪೂರ್ವ ಬಿಡುಗಡೆ ಪ್ರಕ್ರಿಯೆ ಭಾಗವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಬಿಡುಗಡೆಯಾಗುವ ಕೈದಿಗಳನ್ನು, ಬಂದೀಖಾನೆಯ ಗೋಡೆಯಾಚೆಗಿನ ಬಾಹ್ಯ ಪ್ರಪಂಚದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅಣಿಗೊಳಿಸುವುದು ಮತ್ತು ಭವಿಷ್ಯ ರೂಪಿಸಿಕೊಳ್ಳಲು ನೆರವು ನೀಡುವುದು ಇದರ ಉದ್ದೇಶ.
ಜನವರಿ 26ರಂದು ಬಿಡುಗಡೆಯಾಗಲಿರುವ ಕೈದಿಗಳ ಮನಃಪರಿವರ್ತನೆಗೆ ಪೂರಕವಾಗಿ ಕಳೆದ ನವೆಂಬರ್ನಿಂದಲೇ ವಿವಿಧ ಬಗೆಯ ಕಾರ್ಯಕ್ರಮಗಳು ಜಾರಿಯಲ್ಲಿವೆ.ಬೆಂಗಳೂರು, ಮೈಸೂರು, ಧಾರವಾಡ, ವಿಜಯಪುರ, ಬೆಳಗಾವಿ, ಕಲಬುರ್ಗಿ ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹಗಳ ಒಟ್ಟು 190 ಕೈದಿಗಳನ್ನು ಇದರಲ್ಲಿ ತೊಡಗಿಸಲಾಗಿದೆ.
ಕೈದಿಗಳ ಮನಃಪರಿವರ್ತನೆ ಕಾರ್ಯಕ್ರಮ ಸ್ವರೂಪದ ಕುರಿತು ಚೀನಾದಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪೊಲೀಸ್ ಮಹಾನಿರ್ದೇಶಕ ಮತ್ತು ಕರ್ನಾಟಕ ಕಾರಾಗೃಹಗಳ ಮಹಾನಿರೀಕ್ಷಕ ಎಚ್.ಎನ್. ಸತ್ಯನಾರಾಯಣರಾವ್ ಅವರು ರಾಜ್ಯದಲ್ಲೂ ಅಂತಹುದೇ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ. ಇದಕ್ಕೆ ‘ಪೀಸ್ ಮೇಕರ್್ಸ್’ ಸ್ವಯಂ ಸೇವಾ ಸಂಸ್ಥೆ ಸಹಯೋಗವಿದೆ.
ಕಾರಣಾಂತರಗಳಿಂದ ಶಿಕ್ಷೆಗೆ ಗುರಿಯಾಗಿ ಜೈಲು ಸೇರುವ ಅನೇಕರು ಕೀಳರಿಮೆಗೆ ಒಳಗಾಗಿರುತ್ತಾರೆ. ‘ನಾನು ಬಿಡುಗಡೆ ಹೊಂದಿದ ಬಳಿಕ ಈ ನಾಲ್ಕು ಗೋಡೆಗಳಾಚೆಗಿನ ಪ್ರಪಂಚ ನನ್ನನ್ನು ಸ್ವೀಕರಿಸುತ್ತದೆಯೇ?’, ‘ಜೈಲಿನಿಂದ ಹೊರ ಹೋಗಲು ಇಷ್ಟ. ಆದರೆ, ಭಯವಾಗುತ್ತದೆ’, ‘ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮತ್ತೆ ಬಾಳಲು ಸಾಧ್ಯವೇ?’, ‘ನನ್ನಿಂದ ಅದು ಸಾಧ್ಯವೇ?’... ಇಂತಹ ಹತ್ತು–ಹಲವು ಪ್ರಶ್ನೆಗಳು ಅವರನ್ನು ಕಾಡುತ್ತಿರುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ಒದಗಿಸಿ ಮಾನಸಿಕವಾಗಿ, ದೈಹಿಕವಾಗಿ ಅವರನ್ನು ಸಿದ್ಧಗೊಳಿಸುವುದು ಕಾರ್ಯಕ್ರಮದ ಆಶಯ.
ಜೈಲಿನಿಂದ ಬಿಡುಗಡೆಯಾದವರು ತಮ್ಮ ಕಾಲಮೇಲೆ ನಿಲ್ಲಲು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇತ್ಯಾದಿಗಳ ಅಡಿ ಆದ್ಯತೆ ಮೇರೆಗೆ ಆರ್ಥಿಕ ನೆರವು ನೀಡುವಂತೆ ಸೂಚಿಸಲಾಗಿದೆ. ಶಾಹಿ ಎಕ್ಸ್ಪೋರ್ಟ್ಸ್ ಸೇರಿದಂತೆ ಕೆಲ ಖಾಸಗಿ ಕಂಪೆನಿಗಳೂ ಬಿಡುಗಡೆಯಾಗುವವರಿಗೆ ಉದ್ಯೋಗಾವಕಾಶ ಕಲ್ಪಿಸಲು ಮುಂದೆ ಬಂದಿವೆ.
‘ರೂಪಾಂತರ’ ಕಾರ್ಯಕ್ರಮಗಳು
* ವೈಯಕ್ತಿಕ ಚಿತ್ರಣ: ಮೊದಲ ಹಂತದಲ್ಲಿ ಪ್ರತಿಯೊಬ್ಬ ಕೈದಿಯ ವೈಯಕ್ತಿಕ ಸಂದರ್ಶನ ನಡೆಸಿ, ಅವರ ಜೀವನ ಮತ್ತು ಸವಾಲುಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು.
* ಬಿಡುಗಡೆಗಾಗಿ ದೈಹಿಕ ಸಿದ್ಧತೆ: ಎರಡನೇ ಹಂತದಲ್ಲಿ ಕೈದಿಗಳು ನಿಧಾನವಾಗಿ ಸಹಜ ಜೀವನಕ್ಕೆ ಹೊಂದಿಕೊಳ್ಳಲು ಅನುವಾಗುವಂತೆ ಸೂಕ್ತ ದೈಹಿಕ ವ್ಯಾಯಾಮ, ಸರಳ ಆಹಾರ ಪದ್ಧತಿ ಪರಿಚಯಿಸುವುದು ಮತ್ತು ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ವರದಿ ಸಿದ್ಧಪಡಿಸುವುದು.
* ಮಾನಸಿಕ ಹಾಗೂ ಭಾವನಾತ್ಮಕ ಸಿದ್ಧತೆ: ಮೂರನೇ ಹಂತದಲ್ಲಿ ಮಾನಸಿಕ ಹಾಗೂ ಭಾವನಾತ್ಮಕ ಮಟ್ಟದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸಹಾಯವಾಗುವಂತೆ ಕೈದಿಗಳನ್ನು ಗುಂಪು ಚಟುವಟಿಕೆಗಳಲ್ಲಿ ತೊಡಗಿಸುವುದು. ನಾಟಕ, ಸಂಗೀತ, ಚಿತ್ರಕಲೆ ಇತ್ಯಾದಿಗಳಲ್ಲಿ ಸಕ್ರಿಯವಾಗಿ ತೊಡಗಿಸುವುದು.
* ಸಾಮಾಜಿಕ ಸಿದ್ಧತೆ: ನಾಲ್ಕನೇ ಹಂತದಲ್ಲಿ ಕೈದಿಗಳ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಕುಟುಂಬದೊಂದಿಗೆ ಒಟ್ಟಾಗಿಸುವುದು.
* ಆಧ್ಯಾತ್ಮಿಕ ಸಿದ್ಧತೆ: ಐದನೇ ಹಂತದಲ್ಲಿ ಅವರವರ ನಂಬಿಕೆಗಳಿಗೆ ಅನುಗುಣವಾಗಿ ಆಧ್ಯಾತ್ಮಿಕ ಚಿಂತನಕಾರರು ಮತ್ತು ಗುರುಗಳಿಂದ ಸೂಕ್ತ ಮಾರ್ಗದರ್ಶನ ಕೊಡಿಸುವುದು.
* ಅನುಪಾಲನೆ ಹಾಗೂ ನೆರವು: ಬಿಡುಗಡೆ ನಂತರ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಮತ್ತು ಉದ್ಯೋಗ ಮಾಡಲು ಅಗತ್ಯ ನೆರವು ನೀಡುವುದು. ಮೂರು ತಿಂಗಳ ನಂತರ ಅವರು ತಮ್ಮ ಕುಟುಂಬಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
ಮರುಜೀವ ನೀಡುವ ಯೋಜನೆ
ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ ಮೇಲೆ ಬದುಕು ಸರ್ವನಾಶವಾಗಿರುತ್ತದೆ. ಬಿಡುಗಡೆ ನಂತರ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಹದಿನಾಲ್ಕು ವರ್ಷಗಳು ಜೈಲಿನಲ್ಲಿಯೇ ಕಳೆದಿರುತ್ತೇ ವಾದ್ದರಿಂದ ದುಡಿಯುವ ಶಕ್ತಿ ಕುಂದಿರುತ್ತದೆ. ವಯಸ್ಸು ಮೀರಿದ ಕಾರಣ ಉದ್ಯೋಗಾ ವಕಾಶಗಳು ಸಿಗುವುದೂ ಕಷ್ಟ. ಅದರ ಮಧ್ಯೆ ಸಮಾಜದ ಚುಚ್ಚು ಮಾತುಗಳೂ ನಮ್ಮನ್ನು ಜರ್ಜರಿತವಾಗಿಸುತ್ತವೆ.
ಕಳೆದ ಆಗಸ್ಟ್ನಲ್ಲಿ ಬಿಡುಗಡೆಯಾದವರ ಪೈಕಿ ಒಬ್ಬರು ಹತಾಶೆಯಿಂದ ಆತ್ಮಹತ್ಯೆ ಮಾಡಿ ಕೊಂಡರು. ಮತ್ತೊಬ್ಬ ಮಹಿಳೆ, ಮನೆಗೆ ಸೇರಿಸದ ಕಾರಣ ‘ಜೈಲಿನಲ್ಲಿಯೇ ಇರಲು ಅವಕಾಶ ಕೊಡಿ’ ಎಂದು ಜೈಲಿನ ಕದ ತಟ್ಟಿದ್ದರು. ಇಂತಹ ಉದಾಹರಣೆಗಳು ಸಾಕಷ್ಟಿವೆ. ಸ್ನೇಹಿತರು, ಸಂಬಂಧಿಗಳು ಮಾತನಾಡಿಸಿ ಹೋಗುತ್ತಾರೆ. ಆದರೆ, ಬದುಕು ಕಟ್ಟಿಕೊಳ್ಳಲು ನೆರವು ನೀಡು ವವರು ಯಾರೂ ಇರುವುದಿಲ್ಲ. ಬ್ಯಾಂಕ್ಗಳೂ ಸಾಲ ನೀಡುವುದಿಲ್ಲ.
ಸ್ವಂತ ಉದ್ದಿಮೆ ಆರಂಭಿಸುವ ಇಚ್ಛೆ ಇದ್ದರೂ ಹಣಕಾಸಿನ ಕೊರತೆಯ ಕಾರಣ ಮತ್ತೊಬ್ಬರ ಬಳಿ ದಿನಗೂಲಿಯಾಗಿದ್ದೇನೆ. ಈ ಎಲ್ಲ ಸಮಸ್ಯೆಗಳನ್ನು ಮನಗಂಡು ಕೈದಿಗಳ ಪುನರ್ವಸತಿಗೆ ಕಾರ್ಯಕ್ರಮ ರೂಪಿಸಿರುವುದು ಸಂತಸ ತಂದಿದೆ. ಇದು ಕೈದಿಗಳಿಗೆ ಮರುಜೀವ ನೀಡುವ ಯೋಜನೆ ಎನ್ನುತ್ತಾರೆ ಕಳೆದ ಆಗಸ್ಟ್ನಲ್ಲಿ ಬಿಡುಗಡೆಯಾದ ಅನ್ಬುರಾಜ್.
ಪರಿಣಾಮಕಾರಿ ಜಾರಿ ಅಗತ್ಯ
ಅಪರಾಧವನ್ನು ದ್ವೇಷಿಸು ಅಪರಾಧಿಯನ್ನಲ್ಲ ಎಂದು ಬಹುತೇಕ ಕಾರಾಗೃಹಗಳ ಗೋಡೆಗಳ ಮೇಲೆ ಬರೆಯಲಾಗಿದೆ. ಈ ನಿಟ್ಟಿನಲ್ಲಿ ಕಾರಾಗೃಹ ಇಲಾಖೆಯ ‘ರೂಪಾಂತರ’ ಕಾರ್ಯಕ್ರಮ ಸದುದ್ದೇಶದಿಂದ ಕೂಡಿದೆ. ಹಲವಾರು ಸಭೆಗಳಲ್ಲಿ ಈ ಬಗ್ಗೆ ನಾನು ಸಲಹೆ ನೀಡುತ್ತಲೇ ಬಂದಿದ್ದೆ. ಸತ್ಯನಾರಾಯಣರಾವ್ ಅವರು ವಿಶೇಷ ಆಸಕ್ತಿ ವಹಿಸಿ ಕಾರ್ಯಕ್ರಮ ಜಾರಿಗೆ ತಂದಿರುವುದು ಸ್ವಾಗತಾರ್ಹ.
ಶಿಕ್ಷೆಗೆ ಗುರಿಯಾದವರು ಕಾರಾಗೃಹದೊಳಗೆಯೇ ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಹೊಲಿಗೆ, ಕಚೇರಿ ಕೆಲಸ, ಸ್ವಚ್ಛತಾ ಕೆಲಸ, ಗುಡಿ ಕೈಗಾರಿಕೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ, ಬಿಡುಗಡೆ ನಂತರ ಪುನರ್ವಸತಿ ಕಲ್ಪಿಸುವುದು ಮುಖ್ಯ. ಈ ಮೂಲಕ ಅವರು ಸಮಾಜದಲ್ಲಿ ಘನತೆಯಿಂದ ಬಾಳಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ‘ರೂಪಾಂತರ’ ಮೊದಲ ಹೆಜ್ಜೆಯಾಗಿದ್ದು, ಪರಿಣಾಮಕಾರಿಯಾಗಿ ಜಾರಿ ಮಾಡಬೇಕಿದೆ.
-ಪ್ರೊ.ನಂಜರಾಜ ಅರಸ್,
ಮೈಸೂರು ಕೇಂದ್ರ ಕಾರಾಗೃಹ ಸಲಹಾ ಸಮಿತಿ ಸದಸ್ಯ
***
ತಪ್ಪು ಮಾಡಿ, ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಿ, ಪಶ್ಚಾತ್ತಾಪ ಪಟ್ಟು ಹೊರ ಬರುವವರನ್ನು ವಕ್ರದೃಷ್ಟಿಯಿಂದ ನೋಡುವ ಸಮಾಜದ ಮನೋಭಾವ ಬದಲಾಗಬೇಕು. ಎಲ್ಲರಂತೆ ಬದುಕಲು ಅಗತ್ಯ ಸಹಕಾರ ನೀಡಬೇಕು
-ಎಚ್.ಎನ್.ಸತ್ಯನಾರಾಯಣರಾವ್
ಪೊಲೀಸ್ ಮಹಾನಿರ್ದೇಶಕ ಮತ್ತು ಕರ್ನಾಟಕ ಕಾರಾಗೃಹಗಳ ಮಹಾನಿರೀಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.