ADVERTISEMENT

ಕೈ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 8:36 IST
Last Updated 17 ಏಪ್ರಿಲ್ 2018, 8:36 IST
ಕೈ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ
ಕೈ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ   

ಬೆಂಗಳೂರು: ಟಿಕೆಟ್ ಕೈ ತಪ್ಪಿದ ಕಾರಣ ಪಕ್ಷದಲ್ಲಿ ಭುಗಿಲೆದ್ದ ಬಂಡಾಯದ ಮಧ್ಯೆ, ನಗರದ ಹೊರವಲಯದ ದೇವನಹಳ್ಳಿಯ ರೆಸಾರ್ಟ್ ಒಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅಭ್ಯರ್ಥಿಗಳಿಗೆ ಮಂಗಳವಾರ ಬಿ ಫಾರಂ ವಿತರಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಬಿ ಫಾರಂ ಕೊಡಲು‌ ಮುಂದಾದರೆ ಅಲ್ಲೂ ಬಂಡಾಯ ಅಭ್ಯರ್ಥಿಗಳಿಂದ ಪ್ರತಿಭಟನೆ ನಡೆಯಬಹುದೆಂಬ ಆತಂಕದಿಂದ ಪರಮೇಶ್ವರ ರೆಸಾರ್ಟ್‌ಗೆ ವಾಸ್ತವ್ಯ ಬದಲಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆದರೆ, ಅಲ್ಲಿಗೂ ಬಂಡಾಯ ಅಭ್ಯರ್ಥಿಗಳು ಬಂದು. ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಪರಮೇಶ್ವರ ಅವರನ್ನು ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಭೇಟಿ ಮಾಡಿದರು. ಬಾದಾಮಿಯಲ್ಲಿ ಚಿಮ್ಮನಕಟ್ಟಿ ಬದಲಿಗೆ ಡಾ.ದೇವರಾಜ್ ಪಾಟೀಲಗೆ ಟಿಕೆಟ್ ನೀಡಲಾಗಿದೆ.

ADVERTISEMENT

ಜಗಳೂರು ಶಾಸಕ ಎಚ್.ಪಿ.ರಾಜೇಶ್ ಬೆಂಬಲಿಗರ ಜೊತೆ ರೆಸಾರ್ಟ್‌ಗೆ ಬಂದು ಟಿಕೆಟ್ ನೀಡುವಂತೆ ಮನವಿ ಮಾಡಿದರು.

ಸಚಿವ ಸಂತೋಷ್ ಲಾಡ್ ಜೊತೆ ಬಂದ ಬಳ್ಳಾರಿ‌ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ, ಕೂಡ್ಲಿಗಿ ಶಾಸಕ ನಾಗೇಂದ್ರ ಬಿ ಫಾರಂ ಪಡೆದುಕೊಂಡರು.

ಪದ್ಮನಾಭನಗರ ಕ್ಷೇತ್ರದ ಅಭ್ಯರ್ಥಿ ಗುರಪ್ಪ ನಾಯ್ಡು, ಸಾಗರ ಶಾಸಕ ಕಾಗೋಡು ತಿಮ್ಮಪ್ಪ, ಶಾಸಕ ಸತೀಶ್ ಜಾರಕಿಹೊಳಿ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, ಮದೇವಪುರ ಅಭ್ಯರ್ಥಿ ಎ.ಸಿ.ಶ್ರೀನಿವಾಸ್, ಹೆಬ್ಬಾಳ ಅಭ್ಯರ್ಥಿ ಬೈರತಿ ಸುರೇಶ್, ಚಿಂಚೋಳಿ ಶಾಸಕ ಉಮೇಶ್ ಜಾದವ್, ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಕೂಡಾ ಬಿ ಫಾರಂ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.