ಚಾಮರಾಜನಗರ: ಕೊನೆ ಗಳಿಗೆಯಲ್ಲಿ ಪ್ರವಾಸ ರದ್ದುಪಡಿಸಿದ ಪರಿಣಾಮ ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಮಲೇಷ್ಯಾ ವಿಮಾನ ದುರಂತದಿಂದ ಪಾರಾದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಮಂಗೋಲಿಯಾದ ಉಬಾನ್ಬತ್ತಾರ್ನಲ್ಲಿ ಮಾರ್ಚ್ 10ರಿಂದ 14ರವರೆಗೆ ಏಷ್ಯಾ–ಫೆಸಿಫಿಕ್ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಸಂಘಟಿಸಿದೆ. ಕೃಷಿ ಸಮಸ್ಯೆ ಕುರಿತು ವಿಚಾರ ಮಂಡಿಸಲು ರೈತ ಸಂಘದ ಪರವಾಗಿ ಚುಕ್ಕಿ ಅವರು ಈ ಸಮ್ಮೇಳನದಲ್ಲಿ ಭಾಗವಹಿಸಬೇಕಿತ್ತು.
ನಾಪತ್ತೆಯಾಗಿರುವ ಮಲೇಷ್ಯಾ ವಿಮಾನದಲ್ಲಿಯೇ ತೆರಳಲು ಅವರು ಸಿದ್ಧತೆ ನಡೆಸಿದ್ದರು. ಆದರೆ, ಅಮೃತಭೂಮಿಯಲ್ಲಿ ಹಮ್ಮಿಕೊಂಡಿದ್ದ ರೈತ ಸಂಘದ ಕಾರ್ಯ ಚಟುವಟಿಕೆಗಳ ಸಭೆಯ ಹಿನ್ನೆಲೆಯಲ್ಲಿ ಮಾರ್ಚ್ 6ರಂದೇ ಅವರು ಪ್ರವಾಸ ರದ್ದುಪಡಿಸಿದ್ದರು. ಹೀಗಾಗಿ, ಅವರು ದುರಂತದಿಂದ ಪಾರಾಗಿದ್ದಾರೆ.
‘ಅಮೃತಭೂಮಿಯಲ್ಲಿ ರೈತ ಸಂಘದ ಕಾರ್ಯ ಚಟುವಟಿಕೆ ಬಗ್ಗೆ ಚರ್ಚಿಸಲು ವರಿಷ್ಠರೊಂದಿಗೆ ಸಭೆ ನಿಗದಿಯಾಗಿದ್ದರಿಂದ ಅಂತಿಮ ಕ್ಷಣದಲ್ಲಿ ಪ್ರವಾಸ ರದ್ದುಪಡಿಸಿದೆ. ಹೀಗಾಗಿ, ನಾನು ಬದುಕುಳಿದೆ’ ಎಂದು ಚುಕ್ಕಿ ನಂಜುಂಡಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.