ಬೆಂಗಳೂರು: ‘ಕುವೆಂಪು ರಚಿಸಿರುವ ನಾಡಗೀತೆ ಒಳ್ಳೆಯ ಕವಿತೆಯಲ್ಲ ಎಂದು ಹೇಳುವ ಮೂಲಕ ಕವಿ ಮತ್ತು ಕನ್ನಡಿಗರಿಗೆ ವಿಮರ್ಶಕ ಸುಮತೀಂದ್ರ ನಾಡಿಗ್ ಅವಮಾನ ಮಾಡಿದ್ದಾರೆ. ನಾಡಿಗ್ ಕೂಡಲೇ ಬೇಷರತ್ ಕ್ಷಮೆ ಯಾಚಿಸಬೇಕು’ ಎಂದು ರಾಜ್ಯ ಒಕ್ಕಲಿಗರ ಸಂಘ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಅಪ್ಪಾಜಿ ಗೌಡ, ‘ನಾಡಿಗ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘80 ವರ್ಷ ದಾಟಿ ನಾಡಿಗ್ ಅವರು ಬುದ್ಧಿಭ್ರಮಣೆ ಆಗಿದೆ ಎನ್ನುವಂತೆ ವರ್ತಿಸುತ್ತಿದ್ದಾರೆ. ಜಾತ್ಯತೀತ ನಿಲುವನ್ನು ಪ್ರತಿಪಾದಿಸುವ ನಾಡಗೀತೆ ವಿರುದ್ಧದ ಈ ಹೇಳಿಕೆ ಜಾತಿವಾದಿ ಮನಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಅಲ್ಲದೆ, ಅಸಹಿಷ್ಣುತೆ ಕುರಿತ ಅವರ ಹೇಳಿಕೆಯೂ ಮತೀಯ ರಾಜಕೀಯ ಪಕ್ಷ ಹಾಗೂ ಸಂಘಟನೆ ಜತೆಗಿನ ಸಂಬಂಧವನ್ನು ರುಜುವಾತು ಪಡಿಸುತ್ತದೆ. ಸಮಾಜದ ಶಾಂತಿ ಕದಡುವ ಹೇಳಿಕೆ ನೀಡಬಾರದು’ ಎಂದು ಮನವಿ ಮಾಡಿದರು.
ಸ್ಮಾರಕಕ್ಕೆ ಭರವಸೆ
ಮಾಗಡಿಯಲ್ಲಿ ಕೆಂಪೇಗೌಡ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಭರವಸೆ ನೀಡಿದೆ. ಒಂದು ವೇಳೆ ಸರ್ಕಾರ ಕೈಬಿಟ್ಟರೆ, ಸಂಘವು ಸಮುದಾಯದ ಜನರಿಂದ ಹಣ ಸಂಗ್ರಹಿಸಿ ಸ್ಮಾರಕ ನಿರ್ಮಾಣ ಮಾಡುತ್ತದೆ.ಎಂದು ಅಪ್ಪಾಜಿ ಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.