ಗಂಗಾವತಿ: ನಗರದಲ್ಲಿ ಹೋಳಿ ಹಬ್ಬದ ಅಂಗವಾಗಿ ಶುಕ್ರವಾರ ನಡೆದ ಮೆರವಣಿಗೆಯಲ್ಲಿ ಚಪ್ಪಲಿ- ಕಲ್ಲು ತೂರಾಟದಿಂದ ಉಂಟಾದ ಕೋಮು ಘರ್ಷಣೆಯಿಂದಾಗಿ ಪ್ರಕ್ಷುಬ್ಧ ಸ್ಥಿತಿ ಶನಿವಾರವೂ ಮುಂದುವರಿದಿದೆ. ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಆದರೆ ದೈನಂದಿನ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಉಂಟಾಗಿಲ್ಲ.
ವಿಶೇಷವಾಗಿ ಮಹಾತ್ಮ ಗಾಂಧಿ ವೃತ್ತದ ಸಮೀಪ ಇರುವ ಅಲ್ಪಸಂಖ್ಯಾತರ ಕೋಮಿನ ಪ್ರಾರ್ಥನಾ ಮಂದಿರಕ್ಕೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಮೀಸಲು ಪಡೆಯ ವಾಹನ ಮತ್ತು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಭಾನುವಾರ ಬೆಳಗಿನ 6 ಗಂಟೆಯವರೆಗೂ ಕಲಂ 144ರ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ. ಮೆರವಣಿಗೆ, ಧಾರ್ಮಿಕ ಆಚರಣೆ ನಿಷೇಧಿಸಲಾಗಿದೆ. ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದು, ಗುಂಪು ಸೇರುವುದು, ಸಭೆ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಓಣಿ ಓಣಿಗಳಲ್ಲಿ ಸಂಚರಿಸುತ್ತಿರುವ ಪೊಲೀಸರು ಸೂಕ್ಷ್ಮ ವಿಚಾರಗಳ ಬಗ್ಗೆ ನಿಗಾ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.