ಗಂಗಾವತಿ: ಭಾರತೀಯರ ವರ್ಣಮಯ ಬದುಕಿನ ಭಾಗವಾದ ಹೋಳಿಯ ಆಟಕ್ಕೆ ಜಾತಿ–ಧರ್ಮ, ಭಾಷೆ–ದೇಶಗಳ ಗಡಿ ಇಲ್ಲ ಎಂದು ತಾಲ್ಲೂಕಿನ ವಿರುಪಾಪುರಗಡ್ಡೆಯಲ್ಲಿ ಭಾನುವಾರ ನಡೆದ ವಿದೇಶಿಗರ ಓಕುಳಿಯಾಟ ನಿರೂಪಿಸಿತು.
ರಂಗಿನೋತ್ಸವಕ್ಕೆ ವಿದೇಶಿಯರ ಸಂಭ್ರಮ ಸಾಥ್ ನೀಡಿತು. ಅವರು ಭಾನುವಾರ ಸಂಜೆಯಿಂದಲೇ ವಿರುಪಾಪುರಗಡ್ಡೆಯಲ್ಲಿ ರಂಗಿನಾಟದಲ್ಲಿ ತೊಡಗಿದ್ದರು.
ಪ್ರತಿ ವರ್ಷ ಹುಣ್ಣಿಮೆಯ ಮಾರನೇ ದಿನ ರಂಗಿನಾಟ ನಡೆಯುತ್ತಿತ್ತು. ಈ ಬಾರಿ ಹುಣ್ಣಿಮೆಯ ಸಂಜೆಯೇ ರಂಗು ಎರಚಿಕೊಳ್ಳುವಲ್ಲಿ ವಿದೇಶಿಯರು ತಲ್ಲೀನರಾಗಿದ್ದರು.
ಫ್ರಾನ್ಸ್, ಜರ್ಮನ್, ಅಮೆರಿಕಾ, ಸ್ಪೇನ್, ಹಾಲೆಂಡ್, ನೈಜೀರಿಯಾ, ಇಂಗ್ಲೆಂಡ್, ಇಟಲಿ ಮತ್ತು ಇಸ್ರೇಲಿ ದೇಶದ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ವಿದೇಶಿಗರ ಬೇಡಿಕೆಗೆ ತಕ್ಕಂತೆ ಸ್ಥಳೀಯ ಹೋಟೆಲ್ ಮಾಲೀಕರು ವ್ಯವಸ್ಥೆ ಕಲ್ಪಿಸಿದ್ದಾರೆ ಎಂದ ಸ್ಥಳೀಯ ನಿವಾಸಿ ಜೈಶಂಕರ್ ಹೇಳಿದರು.
ಗಡ್ಡಿ ಗ್ರಾಮದ ಮಧ್ಯೆ ಇರುವ ‘ಲಾಫಿಂಗ್ ಬುದ್ಧ’ ಎಂಬ ವಸತಿ ಗೃಹದ ಮುಂದೆ ಜಮಾವಣೆಗೊಂಡ ವಿದೇಶಿಯರು, ಇಲ್ಲಿನ ಐತಿಹಾಸಿಕ ಕಲ್ಲಿನ ಸೇತುವೆವರೆಗೂ ಸಂಗೀತ ಮತ್ತು ನೃತ್ಯದೊಂದಿಗೆ ಮೆರವಣಿಗೆ ಸಾಗಿದರು. ಬಳಿಕ ವಾಪಸ್ ಬಂದು ತುಂಗಭದ್ರಾ ನದಿಯಲ್ಲಿ ಮಿಂದು ಸಂತಸಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.