ADVERTISEMENT

ಗುಂಡು ಗುರಿ ತಪ್ಪಿತೇ?

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಬೆಳ್ತಂಗಡಿ: ನಕ್ಸಲರ ತಂಡದ ಜತೆ ಶನಿವಾರ ತಡರಾತ್ರಿ ನಡೆದ ಗುಂಡಿನ ಚಕಮಕಿ ವೇಳೆ ಎಎನ್‌ಎಫ್ ಸಿಬ್ಬಂದಿಯ ಗುಂಡು ಗುರಿ ತಪ್ಪಿ ಸಹೋದ್ಯೋಗಿ ಮಹಾದೇವ ಮಾನೆ ಬಲಿ ತೆಗೆದುಕೊಂಡಿತೇ? ಹೀಗೊಂದು ಅನುಮಾನ ವ್ಯಕ್ತವಾಗಿದೆ.

ಘಟನೆ ಬಗ್ಗೆ ಅನುಮಾನದ ಹುತ್ತ ತಾಲ್ಲೂಕಿನಾದ್ಯಂತ ಹರಡಿದೆ. ಘಟನಾ ಸ್ಥಳದಲ್ಲಿ ದೊರೆತ ಕುರುಹು ಈ ಶಂಕೆಗೆ ಪುಷ್ಠಿ ನೀಡಿದೆ.

ಗುಡ್ಡದ ಮೇಲೆ ಪೊಲೀಸ್ ಸಿಬ್ಬಂದಿ ಇದ್ದರು. ನಕ್ಸಲರು ಕೆಳಗಿನ ಮಾರ್ಗದಲ್ಲಿ ಬರುತ್ತಿದ್ದರು. ಮಾನೆ ಅವರು ಕೂತಿದ್ದ ಜಾಗದ ಎದುರು ಎರಡು ಬೃಹತ್ ಮರಗಳಿವೆ. ಆ ಮರದ ಮರೆಯಲ್ಲಿ ಕಾರ್ಯಾಚರಣೆ ನಡೆದಿತ್ತು. ಮಹಾದೇವ ಮಾನೆ ಅವರ ಬೆನ್ನಿಗೆ ಗುಂಡು ಹೊಕ್ಕಿದ್ದು, ಎದೆಭಾಗದಲ್ಲಿ ಹೊರಬಂದ ಕುರುಹುಗಳು ಸಿಕ್ಕಿಲ್ಲ.

ಪೊಲೀಸರು ಹೆಚ್ಚು ಸುರಕ್ಷಿತ ಜಾಗದಲ್ಲಿದ್ದರು. ಎದುರಿನಿಂದ ದಾಳಿ ನಡೆಸಿದರೆ ಬೆನ್ನಿಗೆ ಗುಂಡು ತಾಗಲು ಹೇಗೆ ಸಾಧ್ಯ? ನಕ್ಸಲರೆಂದು ಭಾವಿಸಿ ಎಎನ್‌ಎಫ್ ಸಿಬ್ಬಂದಿಯೇ ದಾಳಿ ನಡೆಸಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ವಾದವನ್ನು ತಳ್ಳಿ ಹಾಕಿದ್ದಾರೆ.

`ಪೊಲೀಸರ ಮಟ್ಟಿಗೆ ಶನಿವಾರ ಕೆಟ್ಟ ದಿನ. ಮಾನೆ ಅವರನ್ನು ಕಳೆದುಕೊಂಡು ನಮ್ಮ ತಂಡ ಬಡವಾಗಿದೆ~ ಎಂದು ಐಜಿ ಅಲೋಕ್ ಮೋಹನ್, ಎಸ್‌ಪಿ ಲಾಬೂರಾಮ್ ತಿಳಿಸಿದರು.

ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆ ಮತ್ತು ಎಎನ್‌ಎಫ್ ಸಹಕಾರದಲ್ಲಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.