ADVERTISEMENT

ಗುಪ್ತಚರ ಇಲಾಖೆ: ಮಾಹಿತಿ ಕೇಳಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST

ಬೆಂಗಳೂರು: ಕೇಂದ್ರ ಗುಪ್ತಚರ ಇಲಾಖೆಯು ಯಾವ ಕಾಯ್ದೆಯ ಅಡಿ ಕೆಲಸ ಮಾಡುತ್ತಿದೆ ಎಂಬ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಇಲಾಖೆಯು ನಿರ್ದಿಷ್ಟ ಕಾಯ್ದೆ ಅಡಿ ರಚನೆಗೊಂಡಿಲ್ಲ. ಆದುದರಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟಾಗುತ್ತಿದ್ದು, ಈ ಕುರಿತು ಸೂಕ್ತ ಕ್ರಮಕ್ಕೆ ಗೃಹ ಸಚಿವಾಲಯಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಮಾಹಿತಿ ಬಯಸಿದೆ.

ಈ ಪ್ರಕರಣದ ಮಧ್ಯೆ ಹೈಕೋರ್ಟ್ ಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸಬಹುದೇ ಎಂಬ ಮಾಹಿತಿ ನೀಡುವಂತೆಯೂ ಪೀಠವು ಕೇಂದ್ರಕ್ಕೆ ಮೌಖಿಕವಾಗಿ ಸೂಚಿಸಿದೆ.

ಇಲಾಖೆಯ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಸಲ್ಲಿಸಿರುವ ಅರ್ಜಿ ಇದಾಗಿದೆ. ಸಿಬಿಐ, ಗಡಿ ಭದ್ರತಾ ಪಡೆ ಸೇರಿದಂತೆ ಎಲ್ಲ ತನಿಖಾ ದಳಗಳು ಹಾಗೂ ಭದ್ರತಾ ಪಡೆಗಳು ಸಂಬಂಧಿತ ಕಾಯ್ದೆ ಅಡಿ ರಚನೆಗೊಂಡಿವೆ.

ಇವುಗಳು ಶಾಸನಬದ್ಧವಾಗಿ ರೂಪಿತಗೊಂಡಿವೆ. ಆದರೆ ಗುಪ್ತಚರ ಇಲಾಖೆ ಇದರಿಂದ ಹೊರತಾಗಿದೆ ಎನ್ನುವುದು ಅರ್ಜಿದಾರರ ಆರೋಪ. ಮುಂಬೈನಲ್ಲಿ 26/11ರಂದು ನಡೆದ ದಾಳಿಯನ್ನು ಅರ್ಜಿಯಲ್ಲಿ ಉಲ್ಲೇಖಿಸಿರುವ ಅವರು, ಇಲಾಖೆಯ ವೈಫಲ್ಯವೇ ಇಂತಹ ಘಟನೆ ಸಂಭವಿಸಲು ಕಾರಣ ಎಂದಿದ್ದಾರೆ. ವಿಚಾರಣೆಯನ್ನು ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.