ಧಾರವಾಡ: ‘ಭಾರತ ಮಾತೆ ಇಂದು ಹಿಂದೂ ಮಾತೆಯಾಗಿದ್ದಾಳೆ. ವಂದೇ ಮಾತರಂ ಗೀತೆಯನ್ನು ಆರ್ಎಸ್ಎಸ್ನವರು ಅಪಹರಿಸಿದ್ದಾರೆ. ಹೀಗಾಗಿ ನಮ್ಮ ಗುರಿಯನ್ನು ಸ್ಪಷ್ಟಪಡಿಸಿ ಕೊಂಡೇ ನಾವು ಹೆಜ್ಜೆ ಇಡಬೇಕಿದೆ’ ಎಂದು ಸಾಹಿತಿ ಡಾ. ಚಂದ್ರಶೇಖರ ಪಾಟೀಲ ಹೇಳಿದರು.
ಮೇ ಸಾಹಿತ್ಯ ಮೇಳದಲ್ಲಿ ಭಾನುವಾರ ಸಮಾರೋಪ ನುಡಿಗಳನ್ನಾಡಿದ ಅವರು, ‘ನಮ್ಮನ್ನು ಆಳಿ ಹೋದವರನ್ನು ನಾವು ತೆಗಳಬಹುದು. ಆದರೆ, ಅವರನ್ನು ಆರಿಸಿ ಕಳುಹಿಸಿದ್ದು ನಾವೇ ಎಂಬುದನ್ನು ಮರೆಯಬಾರದು. ಹೀಗಾಗಿ ನಮ್ಮ ಮುಂದಿನ ಗುರಿ ಹಾಗೂ ಉದ್ದೇಶ ಸರಿಯಾಗಿರುವಂತೆ ಎಚ್ಚರ ವಹಿಸಬೇಕು’ ಎಂದರು.
‘ಮೂರು ಸಲ ಮುಖ್ಯ ಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಹೋರಾಟದ ಮೂಲಕವೇ ಬದುಕು ಕಟ್ಟಿಕೊಂಡ ಧೀಮಂತ ನಾಯಕ. ಅವರು ಜೈಶ್ರೀರಾಮ ಅಂದಿಲ್ಲ, ಅಯೋಧ್ಯೆ ಬಗ್ಗೆ ಪ್ರಸ್ತಾಪವನ್ನೂ ಮಾಡಿಲ್ಲ. ಆದರೆ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಹೀಗಾಗಿ ಅವರ ಮೇಲೆ ನಮಗೆಲ್ಲ ಕನಿಕರ ಇದೆ’ ಎಂದರು.
‘ಇತ್ತೀಚಿನ ರಾಜ್ಯ ಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಫಲಿತಾಂಶ ಅತಂತ್ರ ಬಂದ ಮೇಲೆ ಸಮ್ಮಿಶ್ರ ಸರ್ಕಾರ ಅನಿವಾರ್ಯ. ಗುಜರಾತಿಗಳ ಕುದುರೆಯನ್ನು ಕುಮಾರಸ್ವಾಮಿ ಕಟ್ಟಿ ಹಾಕಿದ್ದು ನಿಜ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.