ADVERTISEMENT

ಗುರುನಮನಕ್ಕೆ ಭಕ್ತರ ಸಾಲು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:43 IST
Last Updated 1 ಏಪ್ರಿಲ್ 2018, 19:43 IST
ವಿವಿಧ ಮಠಾಧೀಶರು ಶಿವಕುಮಾರ ಸ್ವಾಮೀಜಿ ಅವರಿಗೆ ಪಾದಪೂಜೆ ಸಲ್ಲಿಸಿದರು
ವಿವಿಧ ಮಠಾಧೀಶರು ಶಿವಕುಮಾರ ಸ್ವಾಮೀಜಿ ಅವರಿಗೆ ಪಾದಪೂಜೆ ಸಲ್ಲಿಸಿದರು   

ತುಮಕೂರು: ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನೋತ್ಸವಕ್ಕೆ ಭಾನುವಾರ ಸಹಸ್ರಾರು ಭಕ್ತರು ಹಾಗೂ ಮಠಾಧೀಶರು ಸಾಕ್ಷಿಯಾದರು.

ಶನಿವಾರ ರಾತ್ರಿಯೇ ನಾಡಿನ ನಾನಾ ಭಾಗಗಳ ಭಕ್ತರು ಮಠಕ್ಕೆ ಬಂದು ವಾಸ್ತವ್ಯ ಹೂಡಿದ್ದರು. ಮಠದ ಆವರಣದಲ್ಲಿ ಅಡಿಗಡಿಗೂ ಸಂಭ್ರಮ ಮನೆ ಮಾಡಿತ್ತು. ಹಳೇ ಮಠದಿಂದ ಹಿಡಿದು ಕ್ಯಾತಸಂದ್ರ ರಸ್ತೆಯವರೆಗೂ ಜನಸಂದಣಿ ಕಿಕ್ಕಿರಿದು ತುಂಬಿತ್ತು.

ಬೆಳಿಗ್ಗೆ 9ರ ವೇಳೆಗೆ ವಿವಿಧ ಮಠಾಧೀಶರು ಶಿವಕುಮಾರ ಶ್ರೀಗಳಿಗೆ ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಭಕ್ತರ ಜಯಘೋಷ, ವಚನಗಾಯನ ಮೊಳಗಿತ್ತು. 10.30ಕ್ಕೆ ಪೂರ್ಣಕುಂಭ ಸ್ವಾಗತದಲ್ಲಿ ಸ್ವಾಮೀಜಿ ಅವರನ್ನು ಸಮಾರಂಭ ನಡೆದ ವೇದಿಕೆಗೆ ಕರೆತರಲಾಯಿತು. ಶ್ರೀಗಳು ಬರುತ್ತಿದ್ದಂತೆ ಜನರು ಎದ್ದು ನಿಂತು ಗೌರವ
ಸಲ್ಲಿಸಿದರು.

ADVERTISEMENT

111 ಜ್ಯೋತಿಗಳನ್ನು ಬೆಳಗಿಸುವ ಮೂಲಕ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂಥನಾಥ ಸ್ವಾಮೀಜಿ ಮಾತನಾಡಿ, ‘ಪ್ರಕೃತಿಯ ನಿಯಮಗಳಿಗೆ ಅನುಗುಣವಾಗಿ ಬದುಕಿದರೆ 100 ವರ್ಷ ಬದುಕಬಹುದು. ಪ್ರಕೃತಿಯ ನಿಯಮಗಳನ್ನು ಮೆಟ್ಟಿ ನಿಲ್ಲುವುದು ಸಾಮಾನ್ಯರಿಗೆ ಸಾಧ್ಯವಿಲ್ಲ. ಅದು ಶಿವಕುಮಾರ ಶ್ರೀ ಅವರಂತಹ ಸಿದ್ಧಪುರುಷರಿಂದ ಮಾತ್ರ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ನಾನು ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ವಾರಕ್ಕೆ ಇಲ್ಲ, 15 ದಿನಕ್ಕೆ ಒಮ್ಮೆ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲು ಮಠಕ್ಕೆ ಬರುತ್ತಿದ್ದೆ’ ಎಂದು ನೆನಪು ಮಾಡಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರು, ‘ಬಸವೋತ್ಸವನ್ನು ತುಂಬಿಕೊಂಡಿರುವ ಶಿವಕುಮಾರ ಸ್ವಾಮೀಜಿ ಯುಗದ ಉತ್ಸಾಹವಾಗಿದ್ದಾರೆ’ ಎಂದು ಬಣ್ಣಿಸಿದರು.

ಮಠಾಧೀಶರ ಸಾಲಿನಲ್ಲಿ ಯಡಿಯೂರಪ್ಪ
ಚುನಾವಣಾ ನೀತಿ ಸಂಹಿತೆ ಪ್ರಯುಕ್ತ ಯಾವುದೇ ರಾಜಕಾರಣಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಶಾಸಕ ಸಿ.ಪಿ.ಯೋಗೀಶ್ವರ್ ವೇದಿಕೆಗೆ ಬಂದು ಶ್ರೀಗಳಿಗೆ ನಮಿಸಿದರು. ನಂತರ ಯಡಿಯೂರಪ್ಪ ಅವರು ಮಠಾಧೀಶರ ಸಾಲಿನಲ್ಲಿಯೇ ಕಾರ್ಯಕ್ರಮ ಮುಗಿಯುವವರೆಗೂ ಕುಳಿತಿದ್ದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.