ಬೆಂಗಳೂರು: ಗೃಹ ಖಾತೆಗಾಗಿ ಕಾಂಗ್ರೆಸ್ ನಾಯಕರ ತೀವ್ರ ಪೈಪೋಟಿ ಆರಂಭವಾಗಿದೆ. ರಾಮಲಿಂಗಾರೆಡ್ಡಿ, ಜಿ.ಪರಮೇಶ್ವರ ಹಾಗೂ ಡಿ.ಕೆ.ಶಿವಕುಮಾರ್ ಗೃಹ ಖಾತೆ ಬೇಕೆಂದು ಬೇಡಿಕೆ ಇಟ್ಟಿದ್ದಾರೆ.
‘ಉಪ ಮುಖ್ಯಮಂತ್ರಿ ಜೊತೆಗೆ ಗೃಹ ಖಾತೆ ಕೊಡಿ ಎಂದು ಪರಮೇಶ್ವರ್ ಬಿಗಿಪಟ್ಟು ಹಿಡಿದರೆ. ಗೃಹ ಖಾತೆ ಕೊಟ್ಟರೆ ಓಕೆ. ಇಲ್ಲದಿದ್ದರೆ ಪಕ್ಷದ ಕೆಲಸ ಮಾಡುತ್ತೇನೆ’ ಎಂದು ರಾಮಲಿಂಗಾರೆಡ್ಡಿ ನಾಯಕರಿಗೆ ಹೇಳಿದ್ದಾರೆ ಎನ್ನಲಾಗಿದೆ.
‘ಗೃಹ ಖಾತೆ ಮೇಲೆ ಡಿ.ಕೆ.ಶಿವಕುಮಾರ್ ಕೂಡ ಕಣ್ಣು ಇಟ್ಟಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ’ ಎಂದೂ ಹೇಳಲಾಗುತ್ತಿದೆ.
ಶಿವಕುಮಾರ್ಗೆ ಸಚಿವ ಸ್ಥಾನ ನೀಡಬೇಕೋ, ಇಲ್ಲವೇ, ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೊ ಎಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್ ಇದೆ. ಮುಂದಿನ ಲೋಕಸಭಾ ಚುನಾವಣೆ ಕಾರಣಕ್ಕೆ ಶಿವಕುಮಾರ್ಗೆ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಯೂ ಇದೆ.
*
ಉಪ ಮುಖ್ಯಮಂತ್ರಿ ಹುದ್ದೆಯ ತಲೆನೋವು
ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೂ ಮೊದಲೇ ಕಾಂಗ್ರೆಸ್ ಹೈಕಮಾಂಡ್ಗೆ ಉಪ ಮುಖ್ಯಮಂತ್ರಿ(ಡಿಸಿಎಂ) ಹುದ್ದೆ ತಲೆನೋವಾಗಿ ಪರಿಣಮಿಸಿದೆ.
ಡಿಸಿಎಂ ಸ್ಥಾನದ ಮೇಲೆ ಹಲವು ನಾಯಕರ ಕಣ್ಣು ಬಿದ್ದಿದ್ದು ತಮಗೇ ಬೇಕೆಂದು ಪಟ್ಟು ಹಿಡಿದಿದ್ದಾರೆ.
ಪರಮೇಶ್ವರ, ಡಿ.ಕೆ.ಶಿವಕುಮಾರ್, ಎಂ.ಬಿ. ಪಾಟೀಲ, ಶಾಮನೂರು ಶಿವಶಂಕರಪ್ಪ ಜೊತೆಗೆ ಸತೀಶ್ ಜಾರಕಿಹೊಳಿ ಹೆಸರು ಸೇರಿಕೊಂಡಿದೆ.
ದಕ್ಷಿಣ ಭಾಗಕ್ಕೆ ಡಿಸಿಎಂ ಕೊಟ್ಟರೆ ಉತ್ತರ ಕರ್ನಾಟಕ ಭಾಗಕ್ಕೂ ನೀಡಿ ಎಂಬ ಒತ್ತಾಯ ಹೆಚ್ಚಿದೆ. ಉತ್ತರ ಕರ್ನಾಟಕದ ಅಸ್ತ್ರ ಬಳಸಿಕೊಂಡು ಆ ಭಾಗದ ನಾಯಕರು ಬೇಡಿಕೆ ಮುಂದಿಟ್ಟಿದ್ದಾರೆ. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಸಂಕಷ್ಟಕ್ಕೆ ಸಿಲುಕಿದ್ದು, ಎರಡು ಡಿಸಿಎಂ ಸ್ಥಾನ ಸೃಷ್ಟಿಸಬೇಕಾದ ಒತ್ತಡದಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.