ADVERTISEMENT

ಗೋಡೆ ಕುಸಿತ: ತಾಯಿ, ಮಗಳ ಸಾವು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ಹಿರೀಸಾವೆಯ ಒಂಟಿಕೊಪ್ಪಲಿನಲ್ಲಿ ಮಂಗಳವಾರ ಮನೆಯ ಗೋಡೆ ಪಕ್ಕದ ಮನೆಯ ಮೇಲೆ ಕುಸಿದು ಬಿದ್ದಿರುವುದು
ಹಿರೀಸಾವೆಯ ಒಂಟಿಕೊಪ್ಪಲಿನಲ್ಲಿ ಮಂಗಳವಾರ ಮನೆಯ ಗೋಡೆ ಪಕ್ಕದ ಮನೆಯ ಮೇಲೆ ಕುಸಿದು ಬಿದ್ದಿರುವುದು   

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಮಳೆಯಾಗಿದೆ. ಹಾಸನ ಜಿಲ್ಲೆ ಹಿರೀಸಾವೆ ಬಳಿಯ ಇಲ್ಲಿಯ ಒಂಟಿಕೊಪ್ಪಲಿನಲ್ಲಿ ಮಂಗಳವಾರ ಮನೆಯೊಂದರ ಗೋಡೆ ಕುಸಿದು ಬಿದ್ದು ತಾಯಿ–ಮಗಳು ಮೃತಪಟ್ಟಿದ್ದಾರೆ. ಮೊಮ್ಮಗಳು ಅಪಾಯದಿಂದ ಪಾರಾಗಿದೆ.

ಸಣ್ಣಮ್ಮ (70), ಸುಜಾತಾ (35) ಮೃತಪಟ್ಟಿದ್ದು, ರಾಜೇಶ್ವರಿ ಗಾಯಗೊಂಡಿದ್ದಾಳೆ. ಮೂವರು ಬೆಳಿಗ್ಗೆ ಅಡುಗೆ ಮನೆಯಲ್ಲಿ ತಿಂಡಿ ತಿನ್ನುತ್ತಿದ್ದಾಗ ಪಕ್ಕದ ಸುಶೀಲಮ್ಮ ಅವರ ಮನೆಯ ದೊಡ್ಡ ಗೋಡೆ ಕುಸಿದು ಇವರ ಮನೆಯ ಮೇಲೆ ಬಿದ್ದಿದೆ. ಹಿರೀಸಾವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾವಣಗೆರೆ ನಗರ ಮತ್ತು ಜಿಲ್ಲೆಯಲ್ಲಿ ಮಂಗಳವಾರ ಹೆಚ್ಚು ಮಳೆಯಾಗಲಿಲ್ಲ. ಆದರೆ ಸೋಮವಾರ ತಡರಾತ್ರಿಯವರೆಗೂ ಸುರಿದ ಮಳೆಯಿಂದ ನಗರ ಮತ್ತು ಜಿಲ್ಲೆಯಲ್ಲಿ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ. ಇದೇ ಮಳೆಯಿಂದ ಕೆರೆ– ಕಟ್ಟೆಗಳೂ ತುಂಬಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ADVERTISEMENT

ಹರಪನಹಳ್ಳಿ ಪಟ್ಟಣದಲ್ಲಿ 48 ಮನೆಗಳು ಭಾಗಶಃ ಕುಸಿದಿವೆ. 36 ಮನೆಗಳಿಗೆ ನೀರು ನುಗ್ಗಿದೆ. ಪಟ್ಟಣದ ಬಿಸಿಎಂ ವಿದ್ಯಾರ್ಥಿನಿಲಯದಲ್ಲಿ ಎರಡು ದಿನಗಳ ಮಟ್ಟಿಗೆ ಗಂಜಿಕೇಂದ್ರ ತೆರೆಯಲಾಗಿದೆ.

ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದೆ.

ಶಿವಮೊಗ್ಗ ನಗರದ ವಿದ್ಯಾನಗರ ರೈಲ್ವೆ ನಿಲ್ದಾಣದ ಬಳಿಯ ಹಲವು ಮನೆಗಳಿಗೆ, ಬಾಪೂಜಿನಗರದ ಕೆಲವು ಮನೆಗಳಿಗೆ ನೀರು ನುಗ್ಗಿದೆ.

ಗದಗ ಜಿಲ್ಲೆಯಾದ್ಯಂತ ಮಂಗಳವಾರವೂ ವರುಣನ ಆರ್ಭಟ ಮುಂದುವರಿದಿದ್ದು, ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಒಂದು ತಾಸು ಗುಡುಗು– ಮಿಂಚು ಸಹಿತ ಮಳೆಯಾಗಿದೆ.

ಶಿರಹಟ್ಟಿ, ನರೇಗಲ್‌, ಲಕ್ಷ್ಮೇಶ್ವರದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿದ್ದು, ಹೊಲಗಳು ಜಲಾವೃತಗೊಂಡಿವೆ. ಕಟಾವಿಗೆ ಬಂದ ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆ ನೆಲಕ್ಕಚ್ಚಿದೆ. ಜಮೀನಿನಲ್ಲಿ ನೀರು ನಿಂತಿರುವುದರಿಂದ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ.

ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಹಳ್ಳ, ನಾಲೆಗಳು ತುಂಬಿ ಹರಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.