ADVERTISEMENT

ಗೌಡರ ಕುಟುಂಬದಿಂದ ಮೋಸದ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಬೆಂಗಳೂರು: `ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬ ಮೋಸ, ನಂಬಿಕೆದ್ರೋಹ ಮತ್ತು `ಬ್ಲಾಕ್‌ಮೇಲ್~ ರಾಜಕಾರಣಕ್ಕೆ ಹೆಸರುವಾಸಿ. ಅಧಿಕಾರಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ~ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಮೈಸೂರು ವಿಭಾಗ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಪತ್ರಕರ್ತರ ಜೊತೆ ಮಾತನಾಡಿದ ಅವರು, `ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ `ಬ್ಲಾಕ್‌ಮೇಲ್~ ರಾಜಕಾರಣ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ.
 
ಆದರೆ, ಜೀವನದುದ್ದಕ್ಕೂ ಅದನ್ನೇ ಮಾಡಿಕೊಂಡು ಬಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗ ನನಗೆ ನೈತಿಕತೆಯ ಪಾಠ ಹೇಳಲು ಬಂದಿದ್ದಾರೆ~ ಎಂದು ತಿರುಗೇಟು ನೀಡಿದರು.

`ದೇವೇಗೌಡರ ಕುಟುಂಬ ಈ ರಾಜ್ಯದ ಹಲವು ರಾಜಕಾರಣಗಳಿಗೆ ಹೇಗೆ `ಬ್ಲಾಕ್‌ಮೇಲ್~ ಮಾಡಿದೆ ಎಂಬುದು ಜನರಿಗೆ ಗೊತ್ತು. ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರಿಂದ  ಯಡಿಯೂರಪ್ಪ ಅವರವರೆಗೆ ಎಲ್ಲರನ್ನೂ ಬೆದರಿಸಿದ್ದಾರೆ ಎಂದು ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ತಾವು ದೇವೇಗೌಡರಿಂದ ಉಪ ಮುಖ್ಯಮಂತ್ರಿ ಹುದ್ದೆ ಪಡೆದಿರಲಿಲ್ಲ. ಅದು ಪಕ್ಷದಿಂದ ದೊರೆತ ಸ್ಥಾನ. 1996 ಮತ್ತು 2004ರಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ತಮಗೆ ಒದಗಿಬಂದಿತ್ತು. ಆದರೆ, ಮೋಸ ಮಾಡಿದ ದೇವೇಗೌಡರು ತಮ್ಮ ಹಕ್ಕನ್ನೇ ಕಿತ್ತುಕೊಂಡರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.