ಶಿವಮೊಗ್ಗ: `ನನಗೆ ಗೌರವ ಇಲ್ಲದ ಮೇಲೆ, ಜನರ ಪ್ರೀತಿ-ವಿಶ್ವಾಸಕ್ಕೆ ಚ್ಯುತಿ ಬಂದಿದೆ ಎಂದು ಅನ್ನಿಸಿದ ಮೇಲೆ ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಮುಂದುವರಿಯಬೇಕಾ? ಎಂಬ ಚಿಂತನೆ ನಡೆಸುತಿದ್ದೇನೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ನಗರ ಮತ್ತು ತಾಲ್ಲೂಕು ಸಮಿತಿ ಹಮ್ಮಿಕೊಂಡಿದ್ದ ಚೈತನ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ನಂಬಿಕೆಯ ಪ್ರೀತಿ-ವಿಶ್ವಾಸಕ್ಕೆ ಧಕ್ಕೆ ಬಂದ ಮೇಲೆ ಅಂತಹ ಕ್ಷೇತ್ರದಲ್ಲಿ ಇರಬಾರದು. ಇದ್ದರೆ ಗೌರವ ಇರುವುದಿಲ್ಲ ಎಂದು ಆವೇಶಭರಿತರಾಗಿ ಹೇಳಿದ ಅವರು, `ಜನರು ತಮಗೆ ನೀಡಿದ ಅಧಿಕಾರವನ್ನು, ಅತ್ಯಂತ ಕಾಳಜಿಯಿಂದ ನಿರ್ವಹಿಸಿ, ಯಾರಿಗೂ ಎಂದಿಗೂ ಕುಂದುಂಟಾಗದಂತೆ, ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗೆ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಆದರೂ ಸಹ ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ~ ಎಂದು ದೂರಿದರು.
ಇಡೀ ದೇಶದಲ್ಲಿಯೇ ಇಲ್ಲಿಯವರೆಗೆ ಯಾವ ಮುಖ್ಯಮಂತ್ರಿಯೂ ಕಂಡರಿಯದಷ್ಟು, ಅನುಭವಿಸದಷ್ಟು, ಕಷ್ಟಗಳನ್ನು ತಾವು ಅನುಭವಿಸಿದ್ದು. ತಮ್ಮ ವಿರುದ್ಧ ಅನೇಕ ಆರೋಪ ಮಾಡಿ, ವಿನಾ ಕಾರಣ ಅಪರಾಧಿಯನ್ನಾಗಿಸಿ, ಜೈಲಿಗೆ ಕಳುಹಿಸಿದರು ಎಂದು ಹೇಳಿದರು.
ಈಗಲೂ ಕೂಡ, ತಮ್ಮ ವಿರುದ್ಧ ನಿರಂತರ ಟೀಕೆ ನಡೆಯುತ್ತಿದ್ದು, ಅವೆಲ್ಲವನ್ನು ಎದುರಿಸಿಕೊಂಡು, ಸಹಿಸಿಕೊಂಡು ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ. ತಾವು ಮುಖ್ಯಮಂತ್ರಿ ಆದ ಸಂದರ್ಭ ಯಾವುದೇ ಅಧಿಕಾರದ ದರ್ಪ, ಮದ ತಮಗಿರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಾಗಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದ್ದೇನೆ ಎಂದು ಸೂಚ್ಯವಾಗಿ ತಿಳಿಸಿದರು.
ಹರಿಹರ ವೀರಶೈವ ಲಿಂಗಾಯಿತ ಪಂಚಮಸಾಲಿ ಮಠಾಧೀಶ ಸಿದ್ದಲಿಂಗೇಶ್ವರ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮತ್ತಿತರರು ಇದ್ದರು.
ವಾಸ್ತವ ನುಡಿದರೆ ಹುಚ್ಚನೇ?
ರಾಜಕೀಯದಲ್ಲಿ ನಡೆದ ವಾಸ್ತವ ಸ್ಥಿತಿಗಳ ಕುರಿತು ಮಾತನಾಡಿದರೆ, ನನಗೆ ಮಾನಸಿಕ ಅಸ್ವಸ್ಥ ಎಂಬ ಹಣೆಪಟ್ಟಿ ಕಟ್ಟುತ್ತಾರೆ ಎಂದು ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರು ಮಾನಸಿಕ ಅಸ್ವಸ್ಥತೆಗೆ ತುತ್ತಾಗಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ತಮಗೂ ಕೂಡ ಅವರು ಬಳಸಿದ ಭಾಷೆಯನ್ನು ಉಪಯೋಗಿಸಲು ಬರುತ್ತದೆ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.