ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ (ಎಸ್ಐಟಿ) ಅಧಿಕಾರಿಗಳು ಮದ್ದೂರಿನ ಕೆ.ಟಿ.ನವೀನ್ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಫೆ.16ರಂದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಈತನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು, ನಾಡ ಪಿಸ್ತೂಲ್ ಹಾಗೂ ‘ಪಾಯಿಂಟ್ 32’ ರಿವಾಲ್ವರ್ನ ಐದು ಗುಂಡುಗಳನ್ನು ಜಪ್ತಿ ಮಾಡಿದ್ದರು. ಮದ್ದೂರಿನ ಕುದಲೂರು ಗ್ರಾಮದಲ್ಲಿರುವ ಆತನ ಮನೆಯಲ್ಲಿ ಶೋಧ ನಡೆಸಿದಾಗ ಮತ್ತೆ 10 ಗುಂಡುಗಳು ಸಿಕ್ಕಿದ್ದವು.
‘ಮೊದಲು ಭಜರಂಗದಳದಲ್ಲಿದ್ದ ನವೀನ್, ನಂತರ ಅದನ್ನು ತೊರೆದು ‘ಹಿಂದೂ ಯುವಸೇನೆ’ ಎಂಬ ಹೊಸ ಸಂಘಟನೆ ಕಟ್ಟಿಕೊಂಡಿದ್ದ. ಪಿಸ್ತೂಲ್ ಹಾಗೂ ರಿವಾಲ್ವರ್ ಇಟ್ಟುಕೊಳ್ಳುವ ಶೋಕಿ ಹೊಂದಿರುವ ಈತ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಶಸ್ತ್ರಾಸ್ತ್ರ ಮಾರಾಟಗಾರರ ಜತೆ ನಂಟು ಹೊಂದಿದ್ದ. ಮೊಬೈಲ್ ಕರೆಗಳ ವಿವರ (ಸಿಡಿಆರ್) ಪರಿಶೀಲಿಸಿದಾಗ ಈತನ ಸಂಪರ್ಕಗಳು ಗೊತ್ತಾದವು. ಹೀಗಾಗಿ, ಗೌರಿ ಹತ್ಯೆ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
**
ಗೌರಿ ಹತ್ಯೆ ಸಂಬಂಧ ಅಧಿಕೃತವಾಗಿ ಯಾರನ್ನೂ ಬಂಧಿಸಿಲ್ಲ. ತನಿಖೆ ಕೊನೆ ಹಂತ<br/>ದಲ್ಲಿದ್ದು, ಸದ್ಯದಲ್ಲೇ ಆರೋಪಿಗಳ ಹೆಸರುಗಳನ್ನು ಬಹಿರಂಗಪಡಿಸುತ್ತೇವೆ –ರಾಮಲಿಂಗಾರೆಡ್ಡಿ, ಗೃಹಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.