ಬೆಂಗಳೂರು: `ಗ್ರಾಮ ಪಂಚಾಯಿತಿ, ಸಹಕಾರಿ ಸಂಘ ಮತ್ತು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಲಾಗುವುದು' ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಸೋಮವಾರ ಸದಸ್ಯ ಭಾನುಪ್ರಕಾಶ್ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು. `ರಾಜ್ಯದಲ್ಲಿ ಸದ್ಯ 20,399 ನ್ಯಾಯ ಬೆಲೆ ಅಂಗಡಿಗಳಿದ್ದು, ಅವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವುದು ಅಗತ್ಯವಿದ್ದು, ಈಗಿರುವ ಅಂಗಡಿಗಳ ಕುರಿತು ಹಲವು ದೂರುಗಳು ಬಂದಿದ್ದು, 54 ಅಂಗಡಿಗಳಲ್ಲಿ ಲೋಪಗಳು ಕಂಡು ಬಂದಿದ್ದರಿಂದ ರದ್ದುಗೊಳಿಸಲಾಗಿದೆ' ಎಂದು ಹೇಳಿದರು.
`ರಾಜ್ಯದಲ್ಲಿ ಈಗ ಎಲ್ಲ ಬಗೆಯ ಪಡಿತರ ಚೀಟಿ ಸೇರಿದಂತೆ 1.33 ಕೋಟಿ ಚೀಟಿದಾರರು ಇದ್ದಾರೆ. ಜನಸಂಖ್ಯೆ ಗಣತಿಯಲ್ಲಿ ಸಿಕ್ಕ ಮಾಹಿತಿಯಂತೆ 1.22 ಕೋಟಿ ಕುಟುಂಬಗಳಿವೆ. ರಾಜ್ಯದಲ್ಲಿ ಇರುವ ಕುಟುಂಬಗಳ ಸಂಖ್ಯೆಗಿಂತ ಅಧಿಕ ಪಡಿತರ ಚೀಟಿಗಳನ್ನು ನೀಡಲಾಗಿದೆ. ಬಿಪಿಎಲ್ ಚೀಟಿಗಳಲ್ಲೂ ಅಕ್ರಮ ನಡೆದಿರುವುದು ಕಂಡು ಬಂದಿದೆ' ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.