ADVERTISEMENT

ಚಿಕ್ಕಮಗಳೂರಿನ ದೇವಿರಮ್ಮನ ಬೆಟ್ಟ, ಗಾಳಿಕೆರೆ ಭಾಗದಲ್ಲಿ ಕಾಳ್ಗಿಚ್ಚು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 15:43 IST
Last Updated 5 ಮಾರ್ಚ್ 2018, 15:43 IST
ಚಿಕ್ಕಮಗಳೂರಿನ ದೇವಿರಮ್ಮನ ಬೆಟ್ಟ, ಗಾಳಿಕೆರೆ ಭಾಗದಲ್ಲಿ ಕಾಳ್ಗಿಚ್ಚು
ಚಿಕ್ಕಮಗಳೂರಿನ ದೇವಿರಮ್ಮನ ಬೆಟ್ಟ, ಗಾಳಿಕೆರೆ ಭಾಗದಲ್ಲಿ ಕಾಳ್ಗಿಚ್ಚು   

ಚಿಕ್ಕಮಗಳೂರು: ತಾಲ್ಲೂಕಿನ ಬಾಬಾಬುಡನ್‌ ಗಿರಿ ಶ್ರೇಣಿಯಲ್ಲಿ ಸೋಮವಾರ ಸಂಜೆ ಬೆಂಕಿ ಹೊತ್ತಿಕೊಂಡಿದ್ದು, ದೇವಿರಮ್ಮನ ಬೆಟ್ಟ, ಗಾಳಿಕೆರೆ ಭಾಗದಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿದೆ.

ಗಿರಿ ಶ್ರೇಣಿಯ ಮೂರು ಕಡೆಗಳಲ್ಲಿ ಬೆಂಕಿ ವ್ಯಾಪಿಸಿದೆ. ಈ ಪ್ರದೇಶದ ಹುಲ್ಲುಗಾವಲು, ಔಷಧೀಯ ಗಿಡಗಳು ಸುಟ್ಟಿವೆ. ಹಾವು, ಅಳಿಲು ಮೊದಲಾದ ಜೀವಸಂಕುಲಗಳು ಬೆಂಕಿಗೆ ಆಹುತಿಯಾಗಿವೆ. ಸುಮಾರು 75 ಎಕರೆಯಲ್ಲಿನ ಸಸ್ಯಸಂಕುಲ ರಾತ್ರಿ 8.30ರ ಹೊತ್ತಿಗೆ ನಾಶವಾಗಿದೆ.

‘ಸಂಜೆ 4 ಗಂಟೆಯಿಂದ ಕಾರ್ಯಾಚರಣೆ ಮಾಡುತ್ತಿದ್ದೇವೆ. ಹಸಿರು ಸೊಪ್ಪಿನಿಂದ ಬಡಿದು ಬೆಂಕಿ ಆರಿಸುತ್ತಿದ್ದೇವೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ರಾತ್ರಿ ವೇಳೆ ಕಾರ್ಯಾಚರಣೆ ಮಾಡುವುದು ತುಸು ಕಷ್ಟ. 25 ಮಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆ. ಬೆಂಕಿಯು ಇತರಡೆಗಳಿಗೆ ವ್ಯಾಪಿಸದಂತೆ ತಡೆಗಟ್ಟಲು ಹರಸಾಹಸಪಡುತ್ತಿದ್ದೇವೆ’ ಎಂದರು.

ಬೆಟ್ಟದಲ್ಲಿ ಬೆಂಕಿಯ ಜ್ವಾಲೆಯ ದಳ್ಳುರಿ ನಗರದ ಐ.ಜಿ.ರಸ್ತೆಯವರೆಗೆ ಕಾಣಿಸುತ್ತಿತ್ತು. ರಾತ್ರಿ 9 ಗಂಟೆಯಾದರೂ ಬೆಂಕಿ ಉರಿಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.