ವಿಜಾಪುರ: ಜಿಲ್ಲೆಯ ಸಿಂದಗಿ ಸಮೀಪದ ಚಿಕ್ಕ ಸಿಂದಗಿ ಬಳಿ ಸೋಮವಾರ ಮಧ್ಯಾಹ್ನ 3.15ರ ವೇಳೆಗೆ ಕ್ರೂಸರ್ ಹಾಗೂ ಬಸ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ದೇವರ ದರ್ಶನಕ್ಕೆ ತೆರಳಿ ಹಿಂದಿರುಗುತ್ತಿದ್ದ 16 ಮಂದಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಎರಡು ಕ್ರೂಸರ್ ಗಳಲ್ಲಿ 23 ಮಂದಿ ದೇವರ ದರ್ಶನಕ್ಕೆ ತೆರಳಿ, ಹಿಂದಿರುಗುತ್ತಿದ್ದರು. ಘಟನೆಯಲ್ಲಿ ಒಂದು ಮಗು ಸೇರಿದಂತೆ 16 ಜನ ಮೃತಪಟ್ಟಿದ್ದಾರೆ. ಉಳಿದವರ ಸ್ಥಿತಿ ಗಂಭೀರವಾಗಿದೆ.
ವಿಜಾಪುರ-ಗುಲ್ಬರ್ಗ ರಸ್ತೆಯಲ್ಲಿ ಘಟನೆ ಜರುಗಿದ್ದು, ಕ್ರೂಸರ್ ವಿಜಾಪುರದಿಂದ ಗುಲ್ಬರ್ಗಕ್ಕೆ, ಖಾಸಗಿ ಬಸ್ ಗುಲ್ಬರ್ಗದಿಂದ ವಿಜಾಪುರಕ್ಕೆ ತೆರಳುತ್ತಿತ್ತು. ಮೃತಪಟ್ಟವರು ಎಲ್ಲರೂ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಡಬಳಪುರ ಮತ್ತು ಕೋಕಳೆ ಗ್ರಾಮದವರು. ಕ್ರೂಸರ್ ವಾಹನದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಿಂದ ಗುಲ್ಬರ್ಗ ಜಿಲ್ಲೆಯ ಗಡಿ ಭಾಗದಲ್ಲಿರುವ ಗಾಣಗಾಪುರದ ದತ್ತ ದೇಗುಲ ದರ್ಶನಕ್ಕೆ ತೆರಳಿ ಹಿಂದಿರುಗುತ್ತಿದ್ದರು.
ಮೃತಪಟ್ಟವರು ಜತ್ ಮಾರ್ಗವಾಗಿ ಸಾಂಗ್ಲಿಗೆ ತೆರಳುವವರಿದ್ದರು. ಘಟನೆಯಲ್ಲಿ ಸತ್ತವರ ಸಂಖ್ಯೆ ಹೆಚ್ಚಬಹುದು ಎಂದು ಘಟನಾ ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.