ADVERTISEMENT

ಚುಟುಕು ಕವಿ ಅಕಬರ ಅಲಿ ನಿಧನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2016, 11:01 IST
Last Updated 21 ಫೆಬ್ರುವರಿ 2016, 11:01 IST
ಚುಟುಕು ಕವಿ ಅಕಬರ ಅಲಿ ನಿಧನ
ಚುಟುಕು ಕವಿ ಅಕಬರ ಅಲಿ ನಿಧನ   

ಮೈಸೂರು: ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿದ್ದ ಡಾ.ಎಂ.ಅಕಬರ ಅಲಿ (91) ಭಾನುವಾರ ಇಲ್ಲಿನ ತಮ್ಮ ಮನೆಯಲ್ಲಿ ನಿಧನರಾದರು.

ಅವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ.

‘ವಿಷಸಿಂಧು’, ‘ಅನ್ನ’, ‘ನವಚೇತನ, ‘ಅಕಬರ ಅಲಿಯ ಚುಟುಕುಗಳು’, ‘ಸುಮನ ಸೌರಭ’, ‘ಗಂಧಕೇಶ್ವರ’, ‘ಬೆಳಕಿನ ಆರಾಧನೆ’ ‘ಕಸಿಗುಲಾಬಿಯ ಕಥನ’ ಸೇರಿದಂತೆ 15ಕ್ಕೂ ಹೆಚ್ಚು ಕೃತಿಗಳನ್ನು ಅವರು ರಚಿಸಿದ್ದರು.

ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಡಿವಿಜಿ ಮುಕ್ತಕ ಪ್ರಶಸ್ತಿ ಮೊದಲಾದ ಪುರಸ್ಕಾರಗಳಿಗೆ ಭಾಜನರಾಗಿದ್ದರು. ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡ್ಡಿ ಖಾನಾಪುರದವರು. ಹುಟ್ಟೂರಿನಲ್ಲಿ ಉರ್ದು ಮಾಧ್ಯಮದಲ್ಲಿ ಪ್ರಾಥಮಿಕ (ನಾಲ್ಕನೇ ತರಗತಿವರೆಗೆ) ಶಿಕ್ಷಣ ಪೂರೈಸಿದರು. ನಂತರ ಕನ್ನಡ ಮಾಧ್ಯಮ ಸೇರಿದರು. ಬೆಳಗಾವಿಯಲ್ಲಿ ಪ್ರೌಢಶಾಲೆ, ಕಾಲೇಜು, ಮುಂಬೈ ವಿಶ್ವವಿದ್ಯಾಲಯದಲ್ಲಿ ಬಿ.ಎ (ಆನರ್ಸ್‌) ಮುಗಿಸಿದರು.

ಪುಣೆ ವಿಶ್ವವಿದ್ಯಾಲಯದಲ್ಲಿ ಎಂ.ಎ,ಮೈಸೂರು ವಿಶ್ವವಿದ್ಯಾಲಯದಲ್ಲಿ  ‘ಸರ್ವಜ್ಞನ ಸಮಾಜದರ್ಶನ ಮತ್ತು ಸಾಹಿತ್ಯ ಸತ್ವ’ ಕುರಿತು ಪಿಎಚ್‌.ಡಿ ಪಡೆದರು. ಪ್ರೌಢಶಾಲಾ ಹಂತದಿಂದ ಸ್ನಾತಕೋತ್ತರ ಪದವಿವರೆಗೆ 35 ವರ್ಷ ನಾಡಿನ ವಿವಿಧೆಡೆ ಬೋಧಕರಾಗಿ ಸೇವೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT