ಬೆಂಗಳೂರು: ವಸತಿ ಸಚಿವ ಎಂ.ಎಚ್.ಅಂಬರೀಷ್ ಮತ್ತು ರಾಜ್ಯಸಭಾ ಸದಸ್ಯ ಎಸ್.ಎಂ.ಕೃಷ್ಣ ಬಣಗಳ ನಡುವಿನ ಕಿತ್ತಾಟವೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸೋಲಿಗೆ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡಿರುವ ಮಾಜಿ ಸಂಸದೆ ರಮ್ಯಾ, ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಮೇ 19ರಂದು ದೆಹಲಿಗೆ ತೆರಳಿದ್ದ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಮಾಡಿ ಚುನಾವಣೆಯಲ್ಲಿ ಸೋತಿರುವ ಕುರಿತು ವಿವರ ನೀಡಿದ್ದಾರೆ. ಅಂಬರೀಷ್ ಬಣ ವಿರುದ್ಧ ನೇರವಾಗಿ ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
‘ಚುನಾವಣೆಯಲ್ಲಿ ಸಮಯದಲ್ಲಿ ಅಂಬರೀಷ್ ಮತ್ತು ಕೃಷ್ಣ ಬಣಗಳ ನಡುವೆ ನಿರಂತರ ಕಿತ್ತಾಟ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರು ಪಕ್ಷದ ಮುಖಂಡರನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಿಲ್ಲ. ನನ್ನನ್ನು ಸೋಲಿಸುವ ಏಕೈಕ ಉದ್ದೇಶದಿಂದ ಸಚಿವರ ಬೆಂಬಲಿಗರು ಪದೇ ಪದೇ ಪಕ್ಷದಲ್ಲಿ ಗೊಂದಲ ಸೃಷ್ಟಿಸಿದರು. ಈ ಅಂಶಗಳು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣ’ ಎಂದು ರಮ್ಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಗೊತ್ತಾಗಿದೆ.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದರು. ಅವರನ್ನು ನಿಯಂತ್ರಿಸುವ ಕೆಲಸ ಮಾಡಲಿಲ್ಲ. ಎರಡೂ ಬಣಗಳ ಮುಖಂಡರು ಸ್ವಪ್ರತಿಷ್ಠೆಗಾಗಿ ಕಿತ್ತಾಟ ಮುಂದುವರಿಸಿದ್ದರು ಎಂದು ದೂರಿದ್ದಾರೆ ಎನ್ನಲಾಗಿದೆ.
ಅಂಬರೀಷ್ ಬೆಂಬಲಿಗರಾದ ಅಮರಾವತಿ ಚಂದ್ರಶೇಖರ್, ಲಿಂಗರಾಜು, ಮಧು ಮಾದೇಗೌಡ, ರಮೇಶ್ ರಾಜು, ಎಲ್.ಆರ್.ಶಿವರಾಮೇಗೌಡ, ಸಿದ್ದರಾಜು, ಬಿ.ವಿವೇಕಾನಂದ ಮತ್ತಿತರರ ಹೆಸರನ್ನು ಮಾಜಿ ಸಂಸದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಎಲ್ಲರೂ ತಮ್ಮ ಸೋಲಿಗೆ ಕಾರಣ ಎಂಬುದಾಗಿ ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನಿಖೆಗೆ ಮನವಿ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಹಿನ್ನಡೆ ಆಗಿರುವ ಕುರಿತು ತನಿಖೆ ನಡೆಸಲು ಎಐಸಿಸಿ ವಿಶೇಷ ಸಮಿತಿಯನ್ನು ಕಳುಹಿಸಬೇಕು. ತಪ್ಪು ಮಾಡಿರುವವರನ್ನು ಗುರುತಿಸಿ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.