ADVERTISEMENT

ಜಗದೀಶ್ ಕಾರಂತಗೆ ಷರತ್ತುಬದ್ಧ ಜಾಮೀನು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 19:43 IST
Last Updated 7 ಅಕ್ಟೋಬರ್ 2017, 19:43 IST
ಶನಿವಾರ ಪುತ್ತೂರು ನ್ಯಾಯಾಲಯದಿಂದ ಜಾಮೀನು ಪಡೆದ ಜಗದೀಶ ಕಾರಂತ, ವಕೀಲರ ಜತೆ ನ್ಯಾಯಾಲಯದಿಂದ ಹೊರಬಂದರು.
ಶನಿವಾರ ಪುತ್ತೂರು ನ್ಯಾಯಾಲಯದಿಂದ ಜಾಮೀನು ಪಡೆದ ಜಗದೀಶ ಕಾರಂತ, ವಕೀಲರ ಜತೆ ನ್ಯಾಯಾಲಯದಿಂದ ಹೊರಬಂದರು.   

ಪುತ್ತೂರು: ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ಅವರಿಗೆ ಶನಿವಾರ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುವ ತನಕ ಕಾರಂತ ಅವರು ಪುತ್ತೂರು ನ್ಯಾಯಾಲಯ ವ್ಯಾಪ್ತಿಯಲ್ಲಿ ಯಾವುದೇ ರ‍್ಯಾಲಿ ಮಾಡಬಾರದು ಮತ್ತು ಉದ್ರೇಕಕಾರಿ ಭಾಷಣ ಮಾಡಬಾರದು. ಸಾಕ್ಷಿದಾರರಿಗೆ ಯಾವುದೇ ರೀತಿಯ ಬೆದರಿಕೆಯೊಡ್ಡಬಾರದು. ಪ್ರತಿ ಭಾನುವಾರ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಲಾಗಿದೆ. ಪುತ್ತೂರು ನ್ಯಾಯಾಲಯ ವ್ಯಾಪ್ತಿಯನ್ನು ಬಿಟ್ಟು ತೆರಳಬಾರದು ಎಂಬ ಆದೇಶಕ್ಕೆ ರಿಯಾಯಿತಿ ನೀಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಪಡೆಯಲು ಜಗದೀಶ್ ಕಾರಂತ, ಶನಿವಾರ ನಾಲ್ಕನೇ ಬಾರಿಗೆ ಪುತ್ತೂರು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಧೀಶ ಸಿ.ಕೆ. ಬಸವರಾಜ್ ಈ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದರು.

ADVERTISEMENT

ಜಗದೀಶ್‌ ಕಾರಂತ ಅವರು ಸೆ.15ರಂದು ಪುತ್ತೂರಿನಲ್ಲಿ ಮಾಡಿದ ಭಾಷಣ ವಿವಾದದ ಕೇಂದ್ರವಾಗಿತ್ತು. ಸೆ.29ರಂದು ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಅದೇ ದಿನ ರಾತ್ರಿ ಅವರಿಗೆ ಮಧ್ಯಂತರ ಜಾಮೀನು ಲಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.