ADVERTISEMENT

ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ: 29 ಶಿಶುಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ರಕ್ಷಣೆ ಮಾಡಲಾದ ನವಜಾತ ಶಿಶುಗಳೊಂದಿಗೆ ತಾಯಂದಿರು ಆಸ್ಪತ್ರೆ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತಿರುವುದು
ರಕ್ಷಣೆ ಮಾಡಲಾದ ನವಜಾತ ಶಿಶುಗಳೊಂದಿಗೆ ತಾಯಂದಿರು ಆಸ್ಪತ್ರೆ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತಿರುವುದು   

ತುಮಕೂರು: ಜಿಲ್ಲಾ ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿನ (ಎನ್‌.ಐ.ಸಿ.ಯು) ಹವಾನಿಯಂತ್ರಿತ (ಎ.ಸಿ) ಯಂತ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಉಂಟಾದ ಕಾರಣ ಶುಕ್ರವಾರ ಸಂಜೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ.

ಘಟಕದಲ್ಲಿ ಮಕ್ಕಳ ಆರೈಕೆ ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ಚಿಕ್ಕಸಿದ್ದಮ್ಮ ಮತ್ತು ರಮೇಶ್ ಅವರ ಸಮಯ ಪ್ರಜ್ಞೆಯಿಂದ ಇತರ ಸಿಬ್ಬಂದಿ ಮತ್ತು ಪೋಷಕರ ನೆರವು ಪಡೆದು 29 ನವಜಾತ ಶಿಶುಗಳನ್ನು ರಕ್ಷಣೆ ಮಾಡಿದ್ದಾರೆ.

ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮಕ್ಕಳ ರಕ್ಷಣೆ ಮಾಡುವಾಗ ಹೊಗೆ ಕುಡಿದು ಅಸ್ವಸ್ಥರಾದ ರಮೇಶ್ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ  ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

’ಎಲ್ಲ 29 ನವಜಾತ ಶಿಶುಗಳು ಸುರಕ್ಷಿತವಾಗಿದ್ದು, ತಾಯಂದಿರ ಮಡಿಲಲ್ಲಿ ಇದ್ದಾರೆ. ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಸಿದ್ಧಗಂಗಾ ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕಕ್ಕೆ ಮಕ್ಕಳನ್ನು ಸ್ಥಳಾಂತರಿಸಿ ಆರೈಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ ರಾಜ್ ಮತ್ತು ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ. ವೀರಭದ್ರಯ್ಯ ತಿಳಿಸಿದರು.

’ಎನ್‌ಐಸಿಯು ಘಟಕದಲ್ಲಿ ಎರಡು ವಿಭಾಗಗಳಿದ್ದು, 19 ಮಕ್ಕಳಿದ್ದ ವಿಭಾಗದಲ್ಲಿದ್ದ ಹವಾನಿಯಂತ್ರಿತ ಯಂತ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿದೆ. ಘಟನೆ ಕುರಿತು ತನಿಖೆ ನಡೆಸಿ ವರದಿ ನೀಡಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.