ಮಂಗಳೂರು: ರಾಜ್ಯದ ಕರಾವಳಿ ತೀರದಲ್ಲಿ ಜೂನ್ 1 ರಿಂದ ಜುಲೈ 31ರವರೆಗೆ ಎಲ್ಲ ಯಾಂತ್ರೀಕೃತ ದೋಣಿ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲಿನ ಇನ್ಬೋರ್ಡ್ ಅಥವಾ ಔಟ್ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳಲ್ಲಿ ಮೀನುಗಾರಿಕೆ ನಡೆಸುವುದಕ್ಕೆ ರಾಜ್ಯ ಸರ್ಕಾರ ನಿಷೇಧ ವಿಧಿಸಿದೆ.
ಕರ್ನಾಟಕ ಕರಾವಳಿ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ, 1986ರ ಅನ್ವಯ ಮಳೆಗಾಲದ ಆರಂಭದಲ್ಲಿ ಸಂತಾನ ವೃದ್ಧಿಗಾಗಿ ತೀರಕ್ಕೆ ಬರುವ ಮೀನು ಮತ್ತು ಮರಿಗಳ ರಕ್ಷಣೆಯ ಸಲುವಾಗಿ ಈ ಆದೇಶ ಹೊರಡಿಸಲಾಗಿದೆ.
ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿಯೇ 10 ಅಶ್ವಶಕ್ತಿಯವರೆಗಿನ ಸಾಮರ್ಥ್ಯದ ಮೋಟಾರೀಕೃತ ದೋಣಿ ಹಾಗೂ ಸಾಂಪ್ರದಾಯಿಕ ಅಥವಾ ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಬಹುದು.
ಈ ನಿಷೇಧ ಉಲ್ಲಂಘಿಸಿ ಮೀನುಗಾರಿಕೆ ನಡೆಸಿದರೆ ದಂಡ ವಿಧಿಸುವುದರ ಜತೆಗೆ ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನ ರದ್ದುಗೊಳಿಸಲಾಗುತ್ತದೆ. ಮೀನುಗಾರರು ಸಹಕರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ದೋಣಿಗಳು ದಡಕ್ಕೆ: ಮೀನುಗಾರಿಕಾ ನಿಷೇಧ ಹಾಗೂ ಕಡಲು ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಗುರುವಾರ ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿ ನೂರಾರು ದೋಣಿಗಳು ಲಂಗರು ಹಾಕಿದ್ದು ಕಾಣಿಸಿತು. ಇನ್ನು ಎರಡು ತಿಂಗಳು ಈ ದೋಣಿಗಳು ಇಲ್ಲೇ ಇರಲಿದ್ದು, ಹವಾಮಾನ ಉತ್ತಮವಿದ್ದರೆ ಆಗಸ್ಟ್ 1ರಿಂದ ಮತ್ತೆ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯಲಿವೆ.
**
**
(60 ದಿನಗಳ ಮೀನುಗಾರಿಕೆ ನಿಷೇಧ ಶುಕ್ರವಾರ ಆರಂಭವಾಗಲಿದ್ದು, ಗುರುವಾರ ಮಂಗಳೂರಿನ ಹಳೆಯ ಬಂದರಿನಲ್ಲಿ ಲಂಗರು ಹಾಕಿದ ಮೀನುಗಾರಿಕೆ ಬೋಟ್ಗಳು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.