ADVERTISEMENT

ಜೆಡಿಎಸ್ ಪ್ರಣಾಳಿಕೆಯಲ್ಲಿ `ಸರ್ವರಿಗೂ ಸೌಕರ್ಯ'

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ಬೆಂಗಳೂರು: ರೈತರು, ಕೃಷಿ ಕಾರ್ಮಿಕರು, ಮೀನುಗಾರರು, ನೇಕಾರರು, ಕುಶಲಕರ್ಮಿಗಳಿಗೆ ಪಿಂಚಣಿ ವ್ಯವಸ್ಥೆ ಮತ್ತು ಸಾಲ ಮನ್ನಾ, ರಸಗೊಬ್ಬರ ಸಬ್ಸಿಡಿ, ರೈತರು ಬೆಳೆಯುವ ದವಸ- ಧಾನ್ಯಗಳಿಗೆ ಹೆಚ್ಚುವರಿಯಾಗಿ ಪ್ರತಿ ಕ್ವಿಂಟಲ್‌ಗೆ 150 ರಿಂದ 500 ರೂಪಾಯಿ ಪ್ರೋತ್ಸಾಹಧನ, ಜಿಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ಕಾಲೇಜು, ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ.

- ವಿಧಾನಸಭಾ ಚುನಾವಣೆಗೆ ಜೆಡಿಎಸ್ ಶನಿವಾರ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು ಇವು.
`ಜನಪರ ನಾಯಕತ್ವ- ಪಾರದರ್ಶಕ ಆಡಳಿತ - ಆರ್ಥಿಕ ಸದೃಢತೆ ನಮ್ಮ ವಾಗ್ದಾನ - ತೀರ್ಮಾನ ನಿಮ್ಮದು' ಎಂಬ ಘೋಷ ವಾಕ್ಯವನ್ನು ಪ್ರಣಾಳಿಕೆ ಒಳಗೊಂಡಿದೆ.

ರಾಜ್ಯಕ್ಕೆ ಮತ್ತು ಬೆಂಗಳೂರಿಗೆ ಸೀಮಿತವಾಗಿ ಎರಡು ಪ್ರತ್ಯೇಕ ಪ್ರಣಾಳಿಕೆಗಳನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಬಿಡುಗಡೆ ಮಾಡಿದರು.

ಕೃಷ್ಣಾ ಮೇಲ್ದಂಡೆ 2ನೇ ಹಂತದ ನೀರಾವರಿ ಯೋಜನೆಗಳ ಶೀಘ್ರ ಅನುಷ್ಠಾನ
`ಕಾವೇರಿ' ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲು ನಿರಂತರ ಹೋರಾಟ
ಎತ್ತಿನಹೊಳೆ ನೀರಾವರಿ ಯೋಜನೆ ಜಾರಿ
ಪಶ್ಚಿಮಘಟ್ಟಗಳಲ್ಲಿ ಹರಿಯುವ ನದಿಗಳ ನೀರು ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಹರಿಸಲು ಕ್ರಮ
ಮುಂದಿನ ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ 65 ಸಾವಿರ ಕೋಟಿ ರೂಪಾಯಿ ಮೀಸಲು. 10 ಲಕ್ಷ ಎಕರೆ ಜಮೀನಿಗೆ ನೀರಾವರಿ.
ಟ್ರ್ಯಾಕ್ಟರ್ ಮತ್ತು ಬಿತ್ತನೆ ಬೀಜಕ್ಕೆ ಶೇ 75ರಷ್ಟು ಸಬ್ಸಿಡಿ
ರೈತರು ಮತ್ತು ಕೃಷಿ ಕಾರ್ಮಿಕರ ಕಲ್ಪವೃಕ್ಷ ನಿಧಿ ಅಡಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಗಾಗಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥೆ ಹೆಸರಿಗೆ ಪ್ರತಿ ತಿಂಗಳು 500 ರೂಪಾಯಿ ಸಹಾಯಧನ
ವಿಧವಾ ಮತ್ತು ವೃದ್ಧಾಪ್ಯ ವೇತನ 1,500 ರೂಪಾಯಿಗೆ ಹೆಚ್ಚಳ
ಅಂಗವಿಕಲರ ಮಾಸಾಶನ 400 ರಿಂದ 2,500 ರೂಪಾಯಿಗೆ ಏರಿಕೆ
70 ವರ್ಷ ಮೀರಿದವರಿಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಮತ್ತು 80 ವರ್ಷ ಮೀರಿದವರಿಗೆ 8 ಸಾವಿರ ರೂಪಾಯಿ ಮಾಸಾಶನ
ಅಂಗನವಾಡಿ ಸಿಬ್ಬಂದಿಗೆ ಮಾಸಿಕ 6 ಸಾವಿರ ರೂಪಾಯಿಗೌರವಧನ ಹಾಗೂ ಸೇವೆ ಕಾಯಂ
ಗ್ರಾಮೀಣ ಭಾಗದ ಗರ್ಭಿಣಿ ಮತ್ತು ಮಗುವಿನ ಆರೈಕೆಗೆ ತಿಂಗಳಿಗೆ 5 ಸಾವಿರ ರೂಪಾಯಿಯಂತೆ 12 ತಿಂಗಳು ನೆರವು
ಹಾಲು ಉತ್ಪಾದಕರಿಗೆ ಲೀಟರ್‌ಗೆ ಒಂದು ರೂಪಾಯಿ ಹೆಚ್ಚುವರಿ ಪ್ರೋತ್ಸಾಹಧನ
ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿನಿಲಯ
ಡಯಾಲಿಸಿಸ್ ಮತ್ತು ಗುಣಪಡಿಸಲಾಗದ ರೋಗಿಗಳಿಗೆ ಪ್ರತಿ ತಿಂಗಳು 6 ಸಾವಿರ ರೂಪಾಯಿ ಸಹಾಯಧನ
ಉತ್ತರ ಕರ್ನಾಟಕ ಭಾಗದಲ್ಲಿ ಜಯದೇವ ಹೃದ್ರೋಗ ಮಾದರಿ ಆಸ್ಪತ್ರೆ
ಸರ್ಕಾರಿ ಶಾಲೆಗಳಲ್ಲಿ 5ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ
ಪೋಟೊ ಪಹಣಿ ಕಾರ್ಯಕ್ರಮ
ಎಲ್ಲ ಪಂಚಾಯಿತಿಗಳಲ್ಲಿ ವೃದ್ಧಾಶ್ರಮ
ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ
ಅಕ್ರಮ - ಸಕ್ರಮ ಜಾರಿ
ಭ್ರಷ್ಟಾಚಾರ ನಿಗ್ರಹಕ್ಕೆ ಸರ್ಕಾರಿ ಇಲಾಖೆಗಳಲ್ಲಿ ಜಾಗೃತಿ ಸಮಿತಿ ರಚನೆ
ಸಾಚಾರ್ ವರದಿ ಅನುಷ್ಠಾನ
ನಗರಾಭಿವೃದ್ಧಿಗಾಗಿ ಡಾ.ಕಸ್ತೂರಿರಂಗನ್ ವರದಿ ಅನುಷ್ಠಾನ
ಪರಿಸರಕ್ಕೆ ಹಾನಿಯಾಗುವಂತಹ ಗಣಿಗಾರಿಕೆ ನಿಷೇಧ
ಜಿಲ್ಲೆ, ತಾಲ್ಲೂಕು ಮತ್ತು ರಾಜ್ಯ ಮಟ್ಟದಲ್ಲಿ ಜನತಾದರ್ಶನ, ಗ್ರಾಮವಾಸ್ತವ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT