ಮಂಗಳೂರು: ಉಳ್ಳಾಲ ಮುಕ್ಕಚ್ಚೇರಿ ಮಸೀದಿ ಎದುರು ಬಿಜೆಪಿ ಕಾರ್ಯಕರ್ತ ಝುಬೈರ್ ಎಂಬುವವರನ್ನು ಕೊಲೆ ಮಾಡಿ, ಇಲ್ಯಾಸ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದ ಆರೋಪದ ಮೇಲೆ ‘ಟಾರ್ಗೆಟ್’ ಗುಂಪಿನ ಐವರನ್ನು ಮಂಗಳೂರು ನಗರ ಪೊಲೀಸರ ವಿಶೇಷ ತಂಡ ಬುಧವಾರ ಬಂಧಿಸಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ‘2016ರಲ್ಲಿ ನಡೆದ ಹಲ್ಲೆ ಪ್ರಕರಣದ ನಂತರ ಹುಟ್ಟಿಕೊಂಡ ವೈಯಕ್ತಿಕ ದ್ವೇಷ ಹಾಗೂ ಮುಕ್ಕಚ್ಚೇರಿ ಮಸೀದಿ ಆಡಳಿತಕ್ಕೆ ಸಂಬಂಧಿಸಿದ ತಕರಾರು ಈ ಕೊಲೆಗೆ ಕಾರಣ. ‘ಉಳ್ಳಾಲ ಟಾರ್ಗೆಟ್’ ಗುಂಪಿನ ಸುಹೈಲ್ ಅಲಿಯಾಸ್ ಅಬ್ದುಲ್ ರಹಿಮಾನ್ ಸುಹೈಲ್ (23), ನಿಜಾಮುದ್ದೀನ್ (23), ಮಹಮ್ಮದ್ ಮುಸ್ತಾಫ (21), ತಾಜುದ್ದೀನ್ ಅಲಿಯಾಸ್ ಹಸನ್ ತಾಜುದ್ದೀನ್ (24) ಮತ್ತು ಆಸಿಫ್ ಅಲಿಯಾಸ್ ಮಂದ ಆಸಿಫ್ (40) ಎಂಬುವವರನ್ನು ಬಂಧಿಸಲಾಗಿದೆ’ ಎಂದರು.
‘ಟಾರ್ಗೆಟ್ ಗುಂಪಿನ ಪ್ರಮುಖ ಸದಸ್ಯ ಅಲ್ತಾಫ್ ಸೇರಿದಂತೆ ಇನ್ನೂ ಕೆಲವರು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಅವರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ’ ಎಂದು ಹೇಳಿದರು.
‘ಗಾಂಜಾ ಮಾರಾಟ ಅಥವಾ ಸೇವನೆಗೆ ಸಂಬಂಧಿಸಿದ ವ್ಯಾಜ್ಯದಿಂದ ಕೊಲೆ ನಡೆದಿದೆ ಎಂಬುದಕ್ಕೆ ಈವರೆಗೆ ಯಾವುದೇ ಸಾಕ್ಷ್ಯಗಳೂ ಲಭ್ಯವಾಗಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.