ADVERTISEMENT

ಡಿ.ಕೆ.ಸುರೇಶ್‌ ಸೇರಿ 11 ಜನರ ವಿರುದ್ಧ ಸಿಬಿಐ ಸರ್ಚ್‌ ವಾರಂಟ್‌

ಅಮಿತ್‌ ಶಾ, ಪ್ರಧಾನಿ ಮೋದಿ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 31 ಮೇ 2018, 4:54 IST
Last Updated 31 ಮೇ 2018, 4:54 IST
ಡಿ.ಕೆ.ಸುರೇಶ್‌ ಸೇರಿ 11 ಜನರ ವಿರುದ್ಧ ಸಿಬಿಐ ಸರ್ಚ್‌ ವಾರಂಟ್‌
ಡಿ.ಕೆ.ಸುರೇಶ್‌ ಸೇರಿ 11 ಜನರ ವಿರುದ್ಧ ಸಿಬಿಐ ಸರ್ಚ್‌ ವಾರಂಟ್‌   

ಬೆಂಗಳೂರು: ಡಿ.ಕೆ.ಶಿವಕುಮಾರ್‌ ಮತ್ತು ನನ್ನನ್ನು ಕೇಂದ್ರ ಸರ್ಕಾರ ಟಾರ್ಗೆಟ್‌ ಮಾಡಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಸಂಸದ ಡಿ.ಕೆ.ಸುರೇಶ್‌, ಶಾಸಕ ಡಿ.ಕೆ.ಶಿವಕುಮಾರ್‌ ಮಾತನಾಡಿದರು.

ಬುಧವಾರ ಸಿಬಿಐ ಕೋರ್ಟ್‌ನಿಂದ ಸರ್ಚ್‌ ವಾರಂಟ್‌ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಡಿ.ಕೆ.ಸುರೇಶ್‌ ಸೇರಿ 11 ಜನರ ವಿರುದ್ಧ ಪ್ರಕರಣ ದಾಖಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ADVERTISEMENT

ಸಿಬಿಐ, ಆದಾಯ ತೆರಿಗೆ ಇಲಾಖೆ ಹಾಗೂ ಇಡಿ ಅಧಿಕಾರಿಗಳೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ನಮ್ಮ ವಿರುದ್ಧ ಪ್ರಕರಣ ದಾಖಲಿಸಲು ತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.

‘ಅಡ್ಡ ದಾರಿ ಹಿಡಿದಿಲ್ಲ. ರಾಜಕೀಯ ಉದ್ದೇಶದಿಂದ ತೊಂದರೆ ನೀಡಲಾಗುತ್ತಿದೆ. ನಮ್ಮ ಬಂಧುಗಳು ಹಾಗೂ ಸ್ನೇಹಿತರಿಗೂ ಚಿತ್ರಹಿಂಸೆ ಕೊಡುವ ಕೆಲಸದಲ್ಲಿ ಬಿಜೆಪಿ ಸರ್ಕಾರ ತೊಡಗಿದೆ. ಆದರೆ, ನಾವು ಯಾವುದಕ್ಕೂ ಹೆದರುವುದಿಲ್ಲ.

ಹುಟ್ಟುಸಾವಿನ ನಡುವೆ ಏನು ಬೇಕಾದರೂ ಆಗಬಹುದು. ನಮ್ಮ ವಿರುದ್ಧ ಸುಳ್ಳು ಪ್ರಕರಣಗಳು ದಾಖಲಾಗಬಹುದು. ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ. ಅಧಿಕಾರ ಸೇರಿದಂತೆ ಯಾವುದೂ ಶಾಶ್ವತ ಅಲ್ಲ. ಸೇಡಿನ ರಾಜಕಾರಣ ಸರಿಯಲ್ಲ. ನ್ಯಾಯಾಂಗಕ್ಕೆ ಗೌರವ ನೀಡುತ್ತೇವೆ. ಆದರೆ, ಸುಳ್ಳು ಪ್ರಕರಣಗಳಿಂದ ನನ್ನನ್ನು ಹೆದರಿಸುತ್ತೇನೆ ಎಂಬುದು ಭ್ರಮೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದರು. 

‌11 ಜನರ ವಿರುದ್ಧ ಸರ್ಚ್‌ ವಾರೆಂಟ್‌ ಪಡೆದಿರುವ ಮಾಹಿತಿ ಇದ್ದು, ಮನೆ, ಕಚೇರಿ ಸೇರಿ ವಿವಿಧ ಕಡೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಲು ಸಿದ್ಧತೆ ನಡೆಸಿರುವುದಾಗಿ ಡಿ.ಕೆ.ಸುರೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.