ADVERTISEMENT

ಡಿವೈಎಸ್‌ಪಿ ಸೇರಿ ಮೂವರ ಸಾವು

ಜೀಪು– ಲಾರಿ ನಡುವೆ ಮುಖಾಮುಖಿ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 10 ಮೇ 2018, 20:32 IST
Last Updated 10 ಮೇ 2018, 20:32 IST
ಬಾಳೇಗೌಡ
ಬಾಳೇಗೌಡ   

ಬಾಗಲಕೋಟೆ: ಸಮೀಪದ ಸಂಗಮ ಕ್ರಾಸ್‌ನ ಬೆಳಗಾವಿ– ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಿಐಡಿ ಡಿವೈಎಸ್‌ಪಿ ಬಾಳೇಗೌಡ ಸೇರಿ ಮೂವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಚುನಾವಣೆ ಕರ್ತವ್ಯ ನಿಮಿತ್ತ ಬೆಂಗಳೂರಿನಿಂದ ಬಾಗಲಕೋಟೆಗೆ ಪೊಲೀಸ್ ಜೀಪ್‌ನಲ್ಲಿ ಇವರು ಬರುತ್ತಿದ್ದರು. ರಾತ್ರಿ 12.45ರ ವೇಳೆ ಎದುರಿಗೆ ಬಂದ ಲಾರಿಗೆ ಜೀಪ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಾಳೇಗೌಡ (55), ಸಿಪಿಐ ಎಚ್‌.ಕೆ.ಶಿವಸ್ವಾಮಿ (55) ಹಾಗೂ ಹೋಂಗಾರ್ಡ್ಸ್‌ನ ಚಾಲಕ ವೇಣುಗೋಪಾಲ (25) ಮೃತಪಟ್ಟವರು.

ಬಾಳೇಗೌಡ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಕಟ್ಟಿಗೆಹಳ್ಳಿಯವರು. ಶಿವಸ್ವಾಮಿ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಹೆಗ್ಗನಹಳ್ಳಿ ನಿವಾಸಿ. ವೇಣುಗೋಪಾಲ ಬೆಂಗಳೂರಿನವರು.

ADVERTISEMENT

ರಕ್ಷಣೆ ಪ್ರಯತ್ನ ಕೈಗೂಡಲಿಲ್ಲ: ಡಿಕ್ಕಿಯ ರಭಸಕ್ಕೆ ಜೀಪ್‌ ಲಾರಿಯೊಳಗೆ ಸಿಲುಕಿಕೊಂಡಿದ್ದು, ಈ ವೇಳೆ ಮೂವರು ತೀವ್ರ ಗಾಯಗೊಂಡು ನರಳುತ್ತಿದ್ದರು.

ಸುದ್ದಿತಿಳಿದು ಸ್ಥಳಕ್ಕೆ ತೆರಳಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಶಿಕೃಷ್ಣ ನೇತೃತ್ವದ ಪೊಲೀಸರ ತಂಡ, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಹೊರ ತೆಗೆದು ಆಸ್ಪತ್ರೆಗೆ ಕೊಂಡೊಯ್ಯಲು ಪ್ರಯತ್ನಿಸಿತು. ಆದರೆ ಅವರ ಪ್ರಯತ್ನ ಫಲನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.