ಬೆಂಗಳೂರು: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಸಂಚಾರಕ್ಕಾಗಿ, ಸಾರ್ವಜನಿಕರ ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದರಿಂದ ತುಮಕೂರು ರಸ್ತೆಯಲ್ಲಿ ಭಾನುವಾರ ರಾತ್ರಿ ದಟ್ಟಣೆ ಉಂಟಾಯಿತು.
ತುಮಕೂರಿನಿಂದ ನಗರಕ್ಕೆ ಬರುತ್ತಿದ್ದ ಪರಮೇಶ್ವರ್ ಅವರಿದ್ದ ಕಾರು ಸುಗಮವಾಗಿ ಸಂಚರಿಸಲೆಂದು ಪೊಲೀಸರು, ಸಂಚಾರಮುಕ್ತ ರಸ್ತೆ ಮಾಡಿಕೊಟ್ಟರು. ಅದಕ್ಕಾಗಿ ಮಾದಾವರದಿಂದ ದಾಸನಪುರದವರೆಗಿನ ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದರು.
ಆ ಮಾರ್ಗದಲ್ಲಿ ಸಂಚರಿಸಬೇಕಿದ್ದ ವಾಹನಗಳೆಲ್ಲವೂ ಮಾದಾವರದ ಸರ್ವೀಸ್ ರಸ್ತೆ ಮೂಲಕ ಊರಿನೊಳಗೆ ಪ್ರವೇಶಿಸಿ, ಮುಂದೆ ಹೋದವು. ಜತೆಗೆ, ನೂರಾರು ಸಂಖ್ಯೆ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲೇ ತಡೆದು ನಿಲ್ಲಿಸಲಾಗಿತ್ತು. ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತುಕೊಂಡಿದ್ದು ಕಂಡುಬಂತು.
ರಮ್ಜಾನ್ ಹಬ್ಬಕ್ಕಾಗಿ ಹೊರ ಜಿಲ್ಲೆ ಹಾಗೂ ರಾಜ್ಯಕ್ಕೆ ಹೋಗಿದ್ದ ಜನ ವಾಪಸ್ ಬರುತ್ತಿದ್ದರು. ನಗರಕ್ಕೆ ಬಂದಿದ್ದವರು ವಾಪಸ್ ತಮ್ಮೂರಿಗೆ ಹೊರಟಿದ್ದರು. ಹೀಗಾಗಿ, ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟಣೆ ಹೆಚ್ಚಿತ್ತು. ಅದೇ ವೇಳೆಯಲ್ಲೇ ಪರಮೇಶ್ವರ್ ಅವರಿಗಾಗಿ ವಾಹನಗಳ ಮಾರ್ಗ ಬದಲಾವಣೆ ಮಾಡಿದ್ದರಿಂದ, ಜನ ಮತ್ತಷ್ಟು ಪರದಾಡುವಂತಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.