ಬೆಂಗಳೂರು: ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಲು ಎಐಸಿಸಿಯ ಉನ್ನತಮಟ್ಟದ ಸಮಿತಿ ರಾಜ್ಯಕ್ಕೆ ಬರುತ್ತಿರುವ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಈ ಕುರಿತು `ಪ್ರಜಾವಾಣಿ' ಅವರನ್ನು ಸಂಪರ್ಕಿಸಿದಾಗ, `ಹೈಕಮಾಂಡ್ನ ಪ್ರತಿನಿಧಿಗಳು ಬರುತ್ತಿರುವ ಕುರಿತು ನನಗೆ ಏನೂ ಗೊತ್ತಿಲ್ಲ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆದಿದೆ. ನಾನು ಇದರಲ್ಲಿ ರಹಸ್ಯವಾಗಿ ಇರಿಸುವಂತಹದ್ದು ಏನೂ ಇಲ್ಲ. ಆದ್ದರಿಂದ ಯಾವುದೇ ಬಗೆಯ ತನಿಖೆಯನ್ನೂ ಸ್ವಾಗತಿಸುತ್ತೇನೆ' ಎಂದರು.
ಟಿಕೆಟ್ಗೆ ಹೆಚ್ಚಿನ ಬೇಡಿಕೆ ಇತ್ತು. ಹಾಗಾಗಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬಳಿಕ ಆಯ್ಕೆ ಸಮಿತಿಯಲ್ಲಿ ಇರುವವರ ಬಗ್ಗೆ ಇಂತಹ ಆರೋಪಗಳನ್ನು ಮಾಡುವುದು ಸಹಜ. ರಾಜ್ಯದ ಮುಖಂಡರು ಮಾಡಿರುವ ಶಿಫಾರಸುಗಳ ಕುರಿತು ಹೈಕಮಾಂಡ್ ಮತ್ತೊಂದು ಸುತ್ತಿನ ಪರಿಶೀಲನೆ ನಡೆಸಿದ ಬಳಿಕವೇ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಿತ್ತೂರು ಕ್ಷೇತ್ರಕ್ಕೆ ಸಂಬಂಧಿಸಿದ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, `ಕಿತ್ತೂರಿನಲ್ಲಿ ಮಾಜಿ ಸಚಿವ ಡಿ.ಬಿ.ಇನಾಂದಾರ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಅವರು ಹಲವು ವರ್ಷಗಳಿಂದ ಪಕ್ಷದಲ್ಲಿದ್ದಾರೆ. ಅಲ್ಲಿ ಟಿಕೆಟ್ ಬಯಸಿದ್ದ ಮತ್ತೊಬ್ಬ ವ್ಯಕ್ತಿ `ಸಂಗೊಳ್ಳಿ ರಾಯಣ್ಣ' ಸಿನಿಮಾ ನಿರ್ಮಿಸಿದ್ದಾರೆ. ಇತರೆ ಯಾವುದೇ ಅರ್ಹತೆಗಳೂ ಆ ವ್ಯಕ್ತಿಗಿಲ್ಲ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.