ADVERTISEMENT

ತಪ್ಪು ಮಾಡಿದ್ದರೆ ಮನ್ನಿಸಪ್ಪಾ ನಂಜುಂಡೇಶ್ವರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST
ತಪ್ಪು ಮಾಡಿದ್ದರೆ ಮನ್ನಿಸಪ್ಪಾ ನಂಜುಂಡೇಶ್ವರ
ತಪ್ಪು ಮಾಡಿದ್ದರೆ ಮನ್ನಿಸಪ್ಪಾ ನಂಜುಂಡೇಶ್ವರ   

ಮೈಸೂರು: ಭಿನ್ನಮತೀಯ ಚಟುವಟಿಕೆಗಳಿಂದ ಆತಂಕದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ನಂಜನಗೂಡಿನ  ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಶತರುದ್ರಪಾರಾಯಣ ಪೂಜೆ ಸಲ್ಲಿಸಿದರು. ದೇವಾಲಯದ ವಿಶಾಲವಾದ ಒಳಾವರಣದಲ್ಲಿರುವ ಚನ್ನಬಸವ ಮಂಟಪದಲ್ಲಿ ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆಯ 51 ವಿದ್ಯಾರ್ಥಿಗಳು, ಶ್ರೀಕಂಠೇಶ್ವರಸ್ವಾಮಿ ದೇವಾಲಯ ಮತ್ತು ಇತರೆ ದೇವಾಲಯಗಳ 50 ಮಂದಿ ಸೇರಿ ಒಟ್ಟು 101 ಋತ್ವಿಕರು ಬೆಳಿಗ್ಗೆ 9  ಗಂಟೆಯಿಂದ 10.50 ಗಂಟೆ ವರೆಗೆ ಶತರುದ್ರಪಾರಾಯಣ ನಡೆಸಿದರು.

ಯಡಿಯೂರಪ್ಪ 10.40 ಗಂಟೆಗೆ ದೇವಾಲಯಕ್ಕೆ ಆಗಮಿಸಿದವರು ಶತರುದ್ರಪಾರಾಯಣದಲ್ಲಿ ಪಾಲ್ಗೊಂಡರು. ಬಳಿಕ ಗಣಪತಿ, ಶಾರದಮ್ಮ, ಪಾರ್ವತಮ್ಮ, ನಾರಾಯಣಸ್ವಾಮಿ, ತಾಂಡವೇಶ್ವರ, ನವಗ್ರಹ, ಈಶ್ವರನ ಪೂಜೆ ಮುಗಿಸಿ11.45 ರ ಹೊತ್ತಿಗೆ ಹೊರ ಬಂದವರು ಮಹಾ ಬಸವನಿಗೆ ಪೂಜೆ ಸಲ್ಲಿಸಿದರು. ಈ ಪಾರಾಯಣವನ್ನು ಲೋಕ ಕಲ್ಯಾಣಾರ್ಥವಾಗಿ ಕೈಗೊಳ್ಳಲಾಗಿದೆ ಎಂದು ಋತ್ವಿಕರು ಹೇಳಿದರು.

ಯಡಿಯೂರಪ್ಪ ಎಂದಿನ ಶ್ವೇತವರ್ಣದ ಸಫಾರಿ ಜೊತೆಗೆ ಹೆಗಲ ಮೇಲೆ ರೇಷ್ಮೆಶಲ್ಯವನ್ನು ಹಾಕಿಕೊಂಡಿದ್ದರು. ಇವರೊಂದಿಗೆ ಕೈಗಾರಿಕೆ  ಸಚಿವ ಮುರುಗೇಶ್ ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ವಿಧಾನ ಪರಿಷತ್ ಸದಸ್ಯರಾದ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ತೋಂಟದಾರ್ಯ ಇದ್ದರು. ನಾವೆಲ್ಲ ಒಂದಾಗಿದ್ದೇವೆ: ಪೂಜೆ ನಂತರ ಗಂಭೀರ ಮುಖಭಾವದೊಂದಿಗೆ ಪತ್ರಕರ್ತರೊಂದಿಗೆ ಮಾತಿಗಿಳಿದ ಅವರು, ‘ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ, ನಾವೆಲ್ಲ ಒಂದಾಗಿದ್ದೇವೆ. ಬಿಜೆಪಿಯಲ್ಲಿ ಭಿನ್ನಮತ ಎನ್ನುವುದು ಮಾಧ್ಯಮಗಳ ಸೃಷ್ಟಿ, ವಿರೋಧ ಪಕ್ಷಗಳ ಭ್ರಮೆ. ನಂಜುಂಡೇಶ್ವರ ಮೇಲೆ ಆಣೆ ಮಾಡಿ ಹೇಳುತ್ತಿದ್ದಾನೆ ನಾವೆಲ್ಲ ಒಟ್ಟಾಗಿದ್ದೇವೆ’ ಎಂದರು.

ತಪ್ಪಾಗಿದ್ದರೆ ಮನ್ನಿಸು:  ‘ಎಲ್ಲ ಕಷ್ಟಗಳನ್ನು ಸಹಿಸುವ ಶಕ್ತಿ ಕೊಡುವಂತೆ ನಂಜುಂಡೇಶ್ವರನಲ್ಲಿ ಪ್ರಾರ್ಥಿಸಿದ್ದೇನೆ. ಜೊತೆ ಈ ವರ್ಷ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು, ಜಲಾಶಯಗಳು ಭರ್ತಿಯಾಗಿ ರಾಜ್ಯದಲ್ಲಿ ಸಮೃದ್ಧಿ ನೆಲೆಸುವಂತೆ ಮಾಡು ಎಂದು ಕೇಳಿಕೊಂಡಿದ್ದೇನೆ. ಅಲ್ಲದೇ ನಾನು ತಿಳಿದೋ, ತಿಳಿಯದೆಯೇ ತಪ್ಪು ಮಾಡಿದ್ದರೆ, ಎಡವಿದ್ದರೆ, ಮನ್ನಿಸಪ್ಪ ಎಂದು ಬೇಡಿಕೊಂಡಿದ್ದೇನೆ’ ಎಂದು ತಿಳಿಸಿದರು.

‘ನನ್ನ ಮತ್ತು ಕೆ.ಎಸ್.ಈಶ್ವರಪ್ಪನವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈಶ್ವರಪ್ಪನವರು ಮೂರು ಕ್ಷೇತ್ರಗಳ ಉಪ ಚುನಾವಣೆ ಸಂಬಂಧವಾಗಿ ಕಾರ್ಯತಂತ್ರ ರೂಪಿಸಲು ಪೂರ್ವಭಾವಿ ಸಭೆ ಸೇರಿ ಚರ್ಚಿಸಿದ್ದಾರೆ. ಇದಕ್ಕೆ ಮಾಧ್ಯಮಗಳು ಬಣ್ಣ ಕಟ್ಟಿವೆ. ಗುರುವಾರ ಈಶ್ವರಪ್ಪ ನೇತೃತ್ವದಲ್ಲಿ ನಾವೆಲ್ಲ ಸಭೆ ಸೇರಿ ಪ್ರಜಾತಂತ್ರ ವ್ಯವಸ್ಥೆಯ ಅಡಿಯಲ್ಲಿ ಕಾರ್ಯತಂತ್ರ ರೂಪಿಸಿ ಗೆಲುವಿಗೆ ಶ್ರಮಿಸುತ್ತೇವೆ’ ಎಂದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಆರ್‌ಎಸ್‌ಎಸ್ ಬೈಠಕ್ ಆಗಾಗ ನಡೆಯುತ್ತಿರುತ್ತದೆ. ಬೈಠಕ್‌ಗೂ, ಬಿಜೆಪಿಯ ಸಭೆಗೂ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.